ಬೆಂಗಳೂರು: ವೃದ್ಧ ದಂಪತಿಯ ಉಸಿರುಗಟ್ಟಿಸಿ ಕೊಲೆ

Update: 2020-06-10 12:11 GMT

ಬೆಂಗಳೂರು, ಜೂ.10: ವೃದ್ಧ ದಂಪತಿಯ ಉಸಿರುಗಟ್ಟಿಸಿ ಕೊಲೆ ಮಾಡಿರುವ ದುರ್ಘಟನೆ ಕಾಮಾಕ್ಷಿಪಾಳ್ಯದ ಕಾವೇರಿಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮೈಸೂರು ಮೂಲದ ನರಸಿಂಹರಾಜು(70) ಹಾಗೂ ಅವರ ಪತ್ನಿ ಸರಸ್ವತಿ(60) ಕೊಲೆಯಾದ ದಂಪತಿಗಳು ಎಂದು ಪೊಲೀಸರು ಗುರುತಿಸಿದ್ದಾರೆ.

ನಗರದ ಕಾವೇರಿಪುರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಈ ದಂಪತಿಗೆ ಸಂತೋಷ್ ಎಂಬ ಪುತ್ರನಿದ್ದಾನೆ. ಮಂಗಳವಾರ ರಾತ್ರಿ ಮನೆಯಲ್ಲಿಯೇ ನರಸಿಂಹರಾಜು ಹಾಗೂ ಸರಸ್ವತಿ ಅವರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಮನೆಗೆಲಸದವರು ಬುಧವಾರ ಬೆಳಗ್ಗೆ 8ರ ವೇಳೆಗೆ ನರಸಿಂಹರಾಜು ಅವರ ಮನೆಗೆ ಹೋದಾಗ ಈ ಇಬ್ಬರು ಶವವಾಗಿರುವುದು ಕಂಡು ಬಂದಿದ್ದು, ಕೂಡಲೇ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ದಂಪತಿಯ ಪುತ್ರ ಸಂತೋಷ್ ಪರಾರಿಯಾಗಿದ್ದಾನೆ. ಮನೆಯಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು, ಕೊಲೆಗೆ ಕಾರಣ ತಿಳಿದು ಬಂದಿಲ್ಲ. 

ಇಬ್ಬರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News