ಬಾಯಿಮಾತಿನ ಹೇಳಿಕೆ ಸರಿಯಲ್ಲ, ಅಧಿಕೃತ ಆದೇಶ ನೀಡಿ: ಡಿ.ಕೆ.ಸುರೇಶ್ ಆಗ್ರಹ
ಬೆಂಗಳೂರು, ಜೂ.11: ಜೂ.14ರಂದು ನಡೆಸಲುದ್ದೇಶಿಸಿದ್ದ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ ಅನುಮತಿ ನೀಡಿರುವುದಾಗಿ ಮುಖ್ಯಮಂತ್ರಿ ಬಾಯಿಮಾತಿನ ಹೇಳಿಕೆ ಮಾತ್ರ ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನಮಗೆ ಬಂದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಅವರ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಕಾರ್ಯಕ್ರಮಕ್ಕೆ ಅನುಮತಿ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿದ್ದೇವೆ. ಆ ಅರ್ಜಿಗೆ ಸಹಮತ ವ್ಯಕ್ತಪಡಿಸಿ ಅಧಿಕೃತವಾಗಿ ಅನುಮತಿ ನೀಡಿದರೆ ಉತ್ತಮ ಎಂದ ಸುರೇಶ್ ಹೇಳಿದ್ದಾರೆ.
ಅನುಮತಿ ನೀಡಿದ್ದಕ್ಕೆ ಸಿಎಂಗೆ ಧನ್ಯವಾದ ಸಲ್ಲಿಸಿದ ಡಿಕೆಶಿ
ಈ ನಡುವೆ ತಾನು ‘‘ಕೆಪಿಸಿಸಿ ಅಧ್ಯಕ್ಷರಾಗಿ ’ಪ್ರತಿಜ್ಞಾ’ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿ ಸಿಕ್ಕಿರುವುದು ಖುಷಿ ತಂದಿದೆ. ಕೋಟಿ ಕಾಂಗ್ರೆಸ್ ಕಾರ್ಯಕರ್ತರ, ಬೆಂಬಲಿಗರ, ಅಭಿಮಾನಿಗಳ ಆಗ್ರಹಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಧನ್ಯವಾದಗಳು. ಕಾರ್ಯಕ್ರಮದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು’’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.
Thank you @CMofKarnataka for permitting us to go ahead with 'Prathigna' event. A new date will be confirmed in due course after discussing with party leaders shortly.
— DK Shivakumar (@DKShivakumar) June 11, 2020