20ನೇ ಪ್ರಕರಣದಲ್ಲೂ ಸಯನೈಡ್ ಮೋಹನ್ ವಿರುದ್ಧದ ಆರೋಪ ಸಾಬೀತು

Update: 2020-06-20 16:52 GMT
ಸಯನೈಡ್ ಮೋಹನ್

ಮಂಗಳೂರು, ಜೂ. 20: ಯುವತಿಯರ ಸರಣಿ ಅತ್ಯಾಚಾರ, ಹತ್ಯೆ ಆರೋಪಿ ಸಯನೈಡ್ ಮೋಹನ್ ಕುಮಾರ್ (57) ಕೇರಳದ ಕಾಸರಗೋಡಿನ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಬೆಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಸಯನೈಡ್ ಮಾತ್ರೆ ನೀಡಿ ಕೊಲೆ ಮಾಡಿದ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶನಿವಾರ ಸಾಬೀತಾಗಿದೆ.

ಆರೋಪಿ ಮೋಹನ್ ಯುವತಿಯನ್ನು ಸಯನೈಡ್ ತಿನ್ನಿಸಿ ಕೊಲೆ ಮಾಡಿರುವ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶೆ ಸಯೀದುನ್ನಿಸಾ ತೀರ್ಮಾನಕ್ಕೆ ಬಂದು ಆತ ತಪ್ಪಿತಸ್ಥ ಎಂದು ಘೋಷಿಸಿದ್ದಾರೆ.

ಇದು ಸಯನೈಡ್ ಮೋಹನ್‌ನ 20ನೇ ಹಾಗೂ ಕೊನೆಯ ಪ್ರಕರಣವಾಗಿದ್ದು, ಶಿಕ್ಷೆಯ ಪ್ರಮಾಣದ ಬಗ್ಗೆ ವಿಚಾರಣೆಯು ಜೂ.24ರಂದು ನಡೆಯುವ ಸಾಧ್ಯತೆ ಇದೆ.

ಪ್ರಕರಣ ವಿವರ: ಕಾಸರಗೋಡಿನ 25 ವರ್ಷ ಪ್ರಾಯದ ಯುವತಿ ಲೇಡಿಸ್ ಹಾಸ್ಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, 2009ರಲ್ಲಿ ಆಕೆಗೆ ಮೋಹನನ ಪರಿಚಯ ಆಗಿತ್ತು. ಆತ ಆಕೆಯನ್ನು ಮದುವೆ ಆಗುವುದಾಗಿ ಭರವಸೆ ನೀಡಿ ಮೂರು ಬಾರಿ ಆಕೆಯ ಮನೆಗೆ ಹೋಗಿ ನಂಬಿಸಿದ್ದನು.
2009ರ ಜುಲೈ 8ರಂದು ಯುವತಿ ಸುಳ್ಯದ ದೇವಸ್ಥಾನಕ್ಕೆಂದು ಮನೆಯಿಂದ ಹೊರಟು ಹೋಗಿದ್ದು, ಸುಳ್ಯದಿಂದ ಮೋಹನ್ ಆಕೆಯನ್ನು ಬೆಂಗಳೂರಿಗೆ ಕರೆದೊಯ್ದಿದ್ದನು. ಮೂರು ದಿನಗಳ ಬಳಿಕ ಮನೆ ಮಂದಿ ಆಕೆಗೆ ಫೋನ್ ಮಾಡಿದಾಗ ಮೋಹನ್ ಕರೆಯನ್ನು ಸ್ವೀಕರಿಸಿ, ‘ಆಕೆ ಸ್ನಾನಕ್ಕೆ ಹೋಗಿದ್ದಾಳೆ, ನಾವು ಮದುವೆ ಆಗಿದ್ದು, ಶೀಘ್ರದಲ್ಲಿಯೇ ಮನೆಗೆ ವಾಪಾಸಾಗುತ್ತೇವೆ’ ಎಂದು ತಿಳಿಸಿದ್ದನು.
ಬೆಂಗಳೂರಿನ ಲಾಡ್ಜ್‌ನಲ್ಲಿ ರೂಂ ಮಾಡಿದ್ದ ಮೋಹನ್ ಜು.15ರಂದು ಬೆಳಗ್ಗೆ ಯುವತಿಯನ್ನು ಸಮೀಪದ ಬಸ್ ನಿಲ್ದಾಣಕ್ಕೆ ಕರೆದೊಯ್ದು ಸಯನೈಡ್ ಮಾತ್ರೆ ನೀಡಿದ್ದನು. ಅದನ್ನು ಸೇವಿಸಿದ ಆಕೆ ಶೌಚಾಲಯದ ಬಾಗಿಲಿನ ಬಳಿ ಕುಸಿದು ಬಿದ್ದಿದ್ದು, ಅಷ್ಟರಲ್ಲಿ ಮೋಹನ್ ಅಲ್ಲಿಂದ ತಪ್ಪಿಸಿಕೊಂಡಿದ್ದ. ಕುಸಿದು ಬಿದ್ದಿದ್ದ ಯುವತಿಯನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ರಾಮಕೃಷ್ಣ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಆಕೆ ಸಾವನ್ನಪ್ಪಿದ್ದಳು. 2009ರ ಅಕ್ಟೋಬರ್‌ನಲ್ಲಿ ಮೋಹನ್ ಬಂಧಿತನಾದ ಸಂದರ್ಭ ಯುವತಿಯ ಸಹೋದರಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಳು.

ಪ್ರಕರಣದಲ್ಲಿ ಯುವತಿಯ ಮೃತದೇಹದ ಪರೀಕ್ಷೆಯಲ್ಲಿ ಸಯನೈಡ್ ಅಂಶ ಇರುವುದು ದೃಢೀಕರಣಗೊಂಡಿತ್ತು.

ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ಅವರು ಈ ಮೊದಲು ಹಾಗೂ ಈ ಬಾರಿ ಜಯರಾಮ ಶೆಟ್ಟಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News