ಅಬುಧಾಬಿಯಲ್ಲಿ ಮೃತಪಟ್ಟ ಅಡ್ಡೂರಿನ ಯುವಕನ ಅಂತ್ಯಕ್ರಿಯೆ

Update: 2020-06-21 07:57 GMT

ಮಂಗಳೂರು, ಜೂ.21: ಎರಡು ವಾರದ ಹಿಂದೆ ಅಬುಧಾಬಿಯಲ್ಲಿ ಮೃತಪಟ್ಟ ಅಡ್ಡೂರಿನ ಪುಣಿಕೋಡಿಯ ದಿ. ನಾರಾಯಣ ಪೂಜಾರಿ ಮತ್ತು ಲಲಿತಾ ದಂಪತಿಯ ಪುತ್ರ ಯಶವಂತ ಪೂಜಾರಿ (37)ಯ ಅಂತ್ಯಕ್ರಿಯೆಯು ರವಿವಾರ ಬಡಕಬೈಲ್‌ನ ಸ್ಮಶಾನ ಭೂಮಿಯಲ್ಲಿ ನೆರವೇರಿತು. ಈ ಸಂದರ್ಭ ಮೃತ ಯುವಕನ ಮನೆಮಂದಿ, ಸಂಬಂಧಿಕರು ಮತ್ತು ಆಪ್ತ ಮಿತ್ರರು ಹಾಗೂ ಮೃತದೇಹವನ್ನು ವಿದೇಶದಿಂದ ಊರಿಗೆ ತಲುಪಿಸುವಲ್ಲಿ ಸಹಕರಿಸಿದ್ದ ಕೆಲವು ಮಂದಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

ಮೂರು ವರ್ಷಗಳ ಹಿಂದೆ ಅಬುಧಾಬಿಗೆ ಉದ್ಯೋಗಕ್ಕೆ ತೆರಳಿದ್ದ ಯಶವಂತ ಪೂಜಾರಿ ಜೂ.5ರಂದು ಹೃದಯಾಘಾತದಿಂದ ಅಲ್ಲೇ ಮೃತಪಟ್ಟಿದ್ದರು. ನಿಧನಕ್ಕೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಯಾಗಿತ್ತು ಮತ್ತು ಮನೆಮಂದಿಗೆ ಸ್ಪಷ್ಟ ಮಾಹಿತಿಯೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಅನಿವಾಸಿ ಉದ್ಯಮಿ ಹಿದಾಯತ್ ಅಡ್ಡೂರ್‌ರ ನೇತೃತ್ವದಲ್ಲಿ ಮೃತರ ಮನೆಯನ್ನೂ ಪತ್ತೆಹಚ್ಚಿ ಮೃತದೇಹವನ್ನು ಶನಿವಾರ ಪೂರ್ವಾಹ್ನ ದುಬೈಯಿಂದ ವಿಮಾನದಲ್ಲಿ ಕಳುಹಿಸಿಕೊಡಲಾಗಿತ್ತು.

ರಾತ್ರಿ ಕಲ್ಲಿಕೋಟೆಗೆ ಮೃತದೇಹ ತಲುಪಿತ್ತು. ಅಲ್ಲಿಂದ ಆ್ಯಂಬುಲೆನ್ಸ್ ಮೂಲಕ ರವಿವಾರ ಮುಂಜಾನೆ ಮಂಗಳೂರಿಗೆ ತರಲಾಗಿತ್ತು. ನಂತರ ಅಡ್ಡೂರಿನ ಮನೆಗೆ ಕೊಂಡೊಯ್ದು ಅಂತಿಮ ಸಂದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಬಡಕಬೈಲ್‌ನ ಸ್ಮಶಾನಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News