ಕೊರೋನ ಚಿಕಿತ್ಸೆ ಹೆಸರಲ್ಲಿ ರಾಜ್ಯ ಸರಕಾರದಿಂದ ಕೋಟ್ಯಾಂತರ ರೂ. ಭ್ರಷ್ಟಾಚಾರ: ಯು.ಟಿ.ಖಾದರ್ ಆರೋಪ

Update: 2020-07-04 15:59 GMT

ಮಂಗಳೂರು, ಜು.4: ಕೊರೋನ ಚಿಕಿತ್ಸೆ ಹೆಸರಲ್ಲಿ ರಾಜ್ಯ ಸರಕಾರ ಭ್ರಷ್ಟಾಚಾರ ನಡೆಸಲು ಹೊರಟಿರುವುದು ಅತ್ಯಂತ ದುರಂತ. ಸರಕಾರದ ಭ್ರಷ್ಟಾಚಾರವನ್ನು ಕಾಂಗ್ರೆಸ್ ಜನರ ಮುಂದಿಟ್ಟು, ಇದರ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಲಿ ಎಂದು ಶಾಸಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸದಿದ್ದಲ್ಲಿ ಈ ಎಲ್ಲ ವಿಚಾರಗಳನ್ನು ನೋಡಲು ಸಲಹಾ ಸಮಿತಿ ರಚನೆ ಮಾಡಿ, ಜನರಿಗೆ ಸ್ಪಷ್ಟನೆ ದೊರಕುವಂತೆ ಮಾಡಲಿ ಎಂದು ಸವಾಲು ಹಾಕಿದರು.

ರಾಜ್ಯ ಸರಕಾರ ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ 1000 ವೆಂಟಿಲೇಟರ್‌ನ್ನು 120 ಕೋಟಿ. ರೂ.ಗೆ ಖರೀದಿ ಮಾಡಲಾಗಿದೆ. ಆದರೆ ಅದರ ಮಾರುಕಟ್ಟೆ ದರ ಕೇವಲ 40 ಕೋಟಿ ರೂ. ಹಾಗೂ 150 ಕೋಟಿ ರೂ. ವೆಚ್ಚದಲ್ಲಿ 4.89ಲಕ್ಷ ಪಿಪಿಇ ಕಿಟ್ ಖರೀದಿ ಮಾಡಲಾಗಿದ್ದು, ಆದರೆ ಅದರ ಮಾರುಕಟ್ಟೆ ದರ ಕೇವಲ 50 ಕೋಟಿ ರೂ., 40 ಕೋಟಿ ರೂ.ನಲ್ಲಿ 10 ಲಕ್ಷ ಮಾಸ್ಕ್ ಖರೀದಿಸಲಾಗಿದೆ. ಹಾಗಾದರೆ ಒಂದು ಮಾಸ್ಕ್‌ಗೆ 400 ರೂ. ವೆಚ್ಚ ತಗಲುತ್ತದೆ. ಇಷ್ಟೆಲ್ಲ ಖರೀದಿ ಮಾಡುವಾಗ ಕಡಿಮೆ ವೆಚ್ಚದಲ್ಲಿ ಬರಬೇಕೇ ಹೊರತು, ಇಲ್ಲಿ ದುಪ್ಪಟ್ಟಾಗಿದೆ. ಇದರಿಂದ ಬಿಜೆಪಿ ಸರಕಾರದ ಭ್ರಷ್ಟಾಚಾರ ಬಯಲಿಗೆ ಬಂದಿದೆ ಎಂದು ಆರೋಪಿಸಿದರು.

ಸರಕಾರ ಸಾಕಷ್ಟು ಮಾಸ್ಕ್ ಖರೀದಿಯ ಲೆಕ್ಕ ನೀಡಿದರೂ ನಗರದ ವೆನ್ಲಾಕ್ ಅಥವಾ ಯಾವುದೇ ಸರಕಾರಿ ಆಸ್ಪತ್ರೆಗಳಲ್ಲಿ ಕ್ವಾರಂಟೈನ್‌ಗೆ ಒಳಗಾಗುವವರಿಗೆ ಮಾಸ್ಕ್ ಕೊಡಲಾಗುತ್ತಿಲ್ಲ. ಅಲ್ಲದೆ, ಎಲ್ಲಿಯೂ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲ ಎಂದು ಆರೋಪಿಸಿದರು.

ದ.ಕ. ಜಿಲ್ಲೆಯಲ್ಲಿ ಕೊವೀಡ್ ಸೋಂಕಿತರು ಮೃತಪಟ್ಟಲ್ಲಿ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲು ಒಂದು ಆ್ಯಂಬುಲೆನ್ಸ್ ಇದೆ. ಮೊನ್ನೆಯಷ್ಟೇ ಮೂವರು ಸೋಂಕಿತರು ಮೃತಪಟ್ಟಿದ್ದು, ಒಂದು ಮೃತದೇಹ ರವಾನೆಯಾದ ಬಳಿಕ ಉಳಿದ ಮೃತದೇಹ ರವಾನೆ ಮಾಡಲು ಸಾಕಷ್ಟು ಸಮಯ ಕಾಯಬೇಕಾಗುತ್ತದೆ. ಇವರಿಗೆ ಏಕೆ ಇನ್ನೂ ಆ್ಯಂಬುಲೆನ್ಸ್ ಖರೀದಿ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

ಸರಕಾರ ಸಂಪೂರ್ಣ ಗೊಂದಲಕ್ಕೊಳಗಾಗಿದ್ದು, ಬರುವಂತಹ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಡಳಿತ ಕೊವೀಡ್‌ ಸೋಂಕಿನಿಂದ ಮೃತಪಟ್ಟವರ ಮೃತದೇಹ ರವಾನೆ ಮಾಡಲು ಹಾಗೂ ಕೊವೀಡ್ ಸೋಂಕಿತರನ್ನೂ ಕೊಂಡೊಯ್ಯಲು ಹೆಚ್ಚುವರಿ ಆ್ಯಂಬುಲೆನ್ಸ್‌ಗಳನ್ನು ಖರೀದಿ ಮಾಡಲಿ ಎಂದು ಖಾದರ್ ಹೇಳಿದರು.

‘ಗೌರವಪೂರ್ವಕ ಅಂತ್ಯಸಂಸ್ಕಾರಕ್ಕೆ ತಂಡ ರಚನೆ’
ಜಿಲ್ಲಾಡಳಿತ ಕೊವೀಡ್ ನಿಭಾಯಿಸುವಲ್ಲಿ ವಿಫಲವಾದಲ್ಲಿ, ರಾಜ್ಯದ ಇತರೆಡೆ ಆದ ಸಮಸ್ಯೆ ದ.ಕ. ಜಿಲ್ಲೆಯಲ್ಲಿ ಆಗಬಾರದೆಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎನ್‌ಜಿಒಗಳ ಸಹಕಾರದಿಂದ ಕೊವೀಡ್ ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗುತ್ತದೆ. ಸೋಂಕಿನಿಂದ ಮೃತಪಟ್ಟವರನ್ನು ಗೌರವಪೂರ್ವಕವಾಗಿ ಅಂತ್ಯಸಂಸ್ಕಾರ ಮಾಡುವ ಕೆಲಸವನ್ನು ಮಾಡಲಾಗುತ್ತದೆ. ಅದಕ್ಕಾಗಿ ವಿಶೇಷ ತಂಡವೊಂದನ್ನು ರಚನೆ ಮಾಡಲಾಗಿದೆ. ಆಸಕ್ತ ಆರೋಗ್ಯವಂತರು ಈ ತಂಡದೊಂದಿಗೆ ಕೈಜೋಡಿಸಬಹುದು. ಅದಕ್ಕಾಗಿ ಶುಭೋದಯ್ ಆಳ್ವ (9886341414), ದಿನೇಶ್ ಕುಂಪಲ (9845479552), ಸವಾದ್ ಸುಳ್ಯ (9591972357) ಅವರನ್ನು ಸಂಪರ್ಕಿಸಬಹುದು. ಆಸಕ್ತರಿಗೆ ತರಬೇತಿ ನೀಡಿ ನಮ್ಮ ತಂಡದೊಂದಿಗೆ ಕೆಲಸ ನಿರ್ವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಖಾದರ್ ಮಾಹಿತಿ ನೀಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News