ಉದ್ಯೋಗ ನೆಪದಲ್ಲಿ ಅರಬ್ ದೇಶಗಳಿಗೆ ಯುವತಿಯರ ಸಾಗಾಟ: ಆರೋಪಿ ಸಿಸಿಬಿ ಬಲೆಗೆ
ಬೆಂಗಳೂರು, ಜು.20: ಉದ್ಯೋಗ ನೆಪದಲ್ಲಿ ಯುವತಿಯರನ್ನು ನಂಬಿಸಿ ಅರಬ್ ದೇಶಗಳಿಗೆ ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಆರೋಪಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆ ಮೂಲದ ಬಸವರಾಜು ಕಳಸದ್ ಯಾನೆ ಡ್ಯಾನ್ಸ್ ಬಾರ್ ಬಸವರಾಜು ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ತಮಿಳುನಾಡು ಮೂಲದ ಅಮಾಯಕ ಯುವತಿಯರನ್ನು ಗುರಿಯಾಗಿಸಿಕೊಂಡು ಯುಎಇ ದೇಶಗಳಿಗೆ ಒತ್ತಾಯ ಪೂರ್ವಕವಾಗಿ ಅಕ್ರಮ ಸಾಗಾಣಿಕೆಯನ್ನು ಮಾಡುತ್ತಿದ್ದ. ತದನಂತರ ಅಲ್ಲಿನ ಡಾನ್ಸ್ ಬಾರ್ ಗಳಲ್ಲಿ ಕೆಲಸ ಮಾಡಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿಯೇ ಆರೋಪಿಯನ್ನು ಬಂಧಿಸಿದ್ದಾರೆ.
ದಕ್ಷಿಣ ಭಾರತದ ಚಿತ್ರರಂಗದ ಕಲಾವಿದರೊಂದಿಗೆ ಫೋಟೋ ತೆಗೆದುಕೊಂಡು ಆರೋಪಿ, ಮಹಿಳೆಯರೊಂದಿಗೆ ಸಂಪರ್ಕ ಸಾಧಿಸಿ ವಂಚನೆ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು, ಆರೋಪಿಯ ವಿರುದ್ಧ ನಂದಿನಿ ಲೇಔಟ್ ಠಾಣೆಯಲ್ಲಿ ಐಪಿಸಿ 420 ಹಾಗೂ 370ರ ಅಡಿ ಪ್ರಕರಣ ದಾಖಲಿಸಿ 9 ಜನ ಯುವತಿಯರನ್ನ ಬೇರೆ ದೇಶದಿಂದ ಅಲ್ಲಿನ ಪೊಲೀಸರ ಸಹಾಯದಿಂದ ರಕ್ಷಣೆ ಮಾಡಲಾಗಿದೆ.