ತುಳು ವಿದ್ವಾಂಸ ಡಾ.ಯು.ಪಿ.ಉಪಾಧ್ಯಾಯರಿಗೆ ಶೃದ್ದಾಂಜಲಿ ಸಭೆ

Update: 2020-07-21 12:35 GMT

ಉಡುಪಿ, ಜು.21: ಖ್ಯಾತನಾಮ ಭಾಷಾ ವಿಜ್ಞಾನಿ, ತುಳು ವಿದ್ವಾಂಸ ಹಾಗೂ ಜಾನಪದ ಸಂಶೋಧಕ ಡಾ. ಉಳಿಯಾರು ಪದ್ಮನಾಭ ಉಪಾಧ್ಯಾಯರ ನಿಧನಕ್ಕೆ ಅವರು ಬಹುಕಾಲ ಸೇವೆ ಸಲ್ಲಿಸಿದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಯಕ್ಷಗಾನ ಕೇಂದ್ರ, ಮಾಹೆ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ವತಿಯಿಂದ ಸೋುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೇಂದ್ರಗಳ ಸಂಯೋಜಕರಾದ ಪ್ರೊ.ವರದೇಶ ಹಿರೇಗಂಗೆ ಮಾತನಾಡಿ ಡಾ. ಯು.ಪಿ.ಉಪಾಧ್ಯಾಯರು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಸಂಶೋಧನ ಮಾರ್ಗದರ್ಶಕರಾಗಿಯೂ, ತುಳು ಭಾಷೆಯ ಆರು ಸಂಪುಟಗಳ ಬೃಹತ್ ನಿಘಂಟಿನ ರಚನೆಯ ಪ್ರಧಾನ ಸಂಪಾದಕರಾಗಿಯೂ ದುಡಿದವರು. ಪಾರಂಪರಿಕ ಮತ್ತು ಆಧುನಿಕ ಎರಡೂ ಜ್ಞಾನಧಾನಗಳ ಪರಿಚಯವಿದ್ದ ಡಾ. ಉಪಾಧ್ಯಾಯರ ವಿದ್ವತ್ತಿಗೆ ಅದರದೇ ಆದ ವೈಶಿಷ್ಟ್ಯ ಮತ್ತು ಆಳ ಇವೆ. ಅವರು ಬಿಟ್ಟುಹೋದ ಅಪಾರ ವಿದ್ವತ್ ಸಾಹಿತ್ಯದ ಸತತವಾದ ಅಧ್ಯಯನವೇ ಅವರಿಗೆ ನಾವು ಸಲ್ಲಿಸಬಹುದಾದ ಶ್ರದ್ಧಾಂಜಲಿ ಎಂದರು.

ಹಿರಿಯ ಸಾಹಿತಿ ಮತ್ತು ತುಳುವ ಪತ್ರಿಕಾ ಸಂಪಾದಕ ಮಂಡಳಿ ಸದಸ್ಯರಾದ ಡಾ. ಪಾದೇಕಲ್ಲು ವಿಷ್ಣು ಭಟ್ ಮಾತನಾಡಿ, ಕರ್ನಾಟಕದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲಿಯೇ ಭಾಷಾಧ್ಯಯನದ ಕ್ಷೇತ್ರದಲ್ಲಿ ಡಾ.ಯು.ಪಿ.ಉಪಾಧ್ಯಾಯರ ಹೆಸರು ಬಹಳ ದೊಡ್ಡದು. ತುಳು ನಿಘಂಟುವಿನ ಆರು ಸಂಪುಟಗಳ ಸಂಪಾದಕ ರಾಗಿ ಅವರ ದುಡಿಮೆ ಮಹತ್ತರವಾದುದು. ಭಾಷಾ ವಿಜ್ಞಾನವಲ್ಲದೆ, ಜಾನಪದ, ಕ್ಷೇತ್ರಕಾರ್ಯ ಇತ್ಯಾದಿಗಳಲ್ಲಿ ಕೂಡ ಅವರು ತುಂಬಾ ದುಡಿದವರು ಎಂದರು.

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಪ್ರತಿವರ್ಷ ನಡೆಯುತ್ತಿದ್ದ ತುಳು ದಿನಾಚರಣೆಯ ಮುಖ್ಯ ಸಂಯೋಜಕರಾಗಿ ಹಾಗೂ ತುಳುವ ಪತ್ರಿಕೆಯ ಸಂಪಾದಕತ್ವದಲ್ಲಿ ಅವರ ಪಾತ್ರ ಮುಖ್ಯವಾಗಿತ್ತು. ಹಲವು ಒತ್ತಡಗಳ ಮಧ್ಯದಲ್ಲಿಯೂ ಗಂಭೀರವಾದ ಅಧ್ಯಯನ ಮುಂದುವರಿಸಿದ ಉಪಾಧ್ಯಾಯರ ಅನುಭವ ಪ್ರಪಂಚ ವಿಸ್ತಾರವಾದುದಾಗಿತ್ತು. ಅವರ ಆತ್ಮಕಥನ ವನ್ನು ಅವರು ಬರೆದಿರುತ್ತಿದ್ದರೆ ಅವರ ಇನ್ನೆಷ್ಟೋ ಅಮೂಲ್ಯ ಅನುಭವಗಳು ನಮಗೆ ದೊರಕುತ್ತಿದ್ದವು. ತುಳುನಾಡಿಗೆ, ತುಳುಭಾಷೆಗೆ, ದ್ರಾವಿಡ ಭಾಷಾ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ ಎಂದರು.

ಹಿರಿಯ ಲೇಖಕ ಹಾಗೂ ಭಾಷಾ ವಿದ್ವಾಂಸರಾದ ಡಾ.ಎನ್.ಟಿ ಭಟ್ ಮಾತನಾಡಿ ನೇರ ಕ್ಷೇತ್ರ ಕಾರ್ಯಮಾಡಿ ರಚಿಸಿದ ನಿಘಂಟುಗಳಲ್ಲಿ ತುಳು ನಿಘಂಟು ಮೊದಲನೆಯದು. ಯೋಗ ಗುರುಗಳಾಗಿ ಜನಮನ್ನಣೆ ಪಡೆದ ಉಪಾಧ್ಯಾಯರು ಸದಾ ಸಹನಾಮೂರ್ತಿ. ಇವರ ಅದ್ಭುತ ಕೃತಿಗಳೇ ನಮಗೆ ಆದರ್ಶ. ಇವರ ಅಗಲಿಕೆ ಸಂಸ್ಥೆಗೆ, ತುಳು ಜಾನಪದ ಲೋಕಕ್ಕೆ ಅಪಾರ ನಷ್ಟ ಎಂದರು.

ಕೇಂದ್ರದ ಆಡಳಿತಾಧಿಕಾರಿ ಪ್ರೊ.ಎಂ.ಎಲ್. ಸಾಮಗ, ಉಪಾಧ್ಯಾಯರು ತಮ್ಮ ದೈಹಿಕ ಬಳಲಿಕೆಯ ವೃದ್ಧಾಪ್ಯದಲ್ಲಿಯೂ ಸಾಂಸ್ಕೃತಿಕ, ಸಾಹಿತ್ಯಿಕ ಇತ್ಯಾದಿ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುವ ಅವರ ಜೀವನ ಶ್ರದ್ಧೆಯನ್ನು ನೆನಪಿಸಿಕೊಂಡರು.ಲಚ್ಚೇಂದ್ರ ಹಾಗೂ ವೆಂಕಟೇಶ್ ಉಪಾಧ್ಯಾಯರ ಒಡನಾಟ ವನ್ನು ಸ್ಮರಿಸಿಕೊಂಡರು. ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News