ಕುಡಿತದ ಮತ್ತಿನಲ್ಲಿ ಸ್ನೇಹಿತನ ಕೊಲೆ: ಆರೋಪಿಯ ಸೆರೆ

Update: 2020-07-24 17:08 GMT

ಕಾಪು, ಜು.24: ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಕೊಲೆಗೈದು ಮೃತದೇಹವನ್ನು ಮನೆಯಂಗಳದಲ್ಲಿ ಸುಡಲು ಯತ್ನಿಸಿದ ಘಟನೆ ಶಿರ್ವ ಠಾಣಾ ವ್ಯಾಪ್ತಿಯ ಪುಂಚಲಕಾಡು ಎಂಬಲ್ಲಿ ನಡೆದಿದೆ.

ಎರ್ಮಾಳ್ ನಿವಾಸಿ ಹೇಮಂತ್ ಪೂಜಾರಿ(45) ಕೊಲೆಯಾದವರು. ಪುಂಚಲಕಾಡು ನಿವಾಸಿ ಅಲ್ಬನ್ ಡಿಸೋಜ (50)ಕೊಲೆ ಆರೋಪಿ. ಈತನನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಈ ಕೊಲೆ ನಡೆದಿದ್ದು, ಸಂಜೆಯ ವೇಳೆ ಕೃತ್ಯ ಬೆಳಕಿಗೆ ಬಂದಿದೆ.

ಹೇಮಂತ್ ಮತ್ತು ಅಲ್ಬನ್ ಡಿಸೋಜ ಸ್ನೇಹಿತರಾಗಿದ್ದು, ಇಂದು ಬೆಳಗ್ಗೆ ಕಾಪುವಿನ ಬಾರ್‌ವೊಂದರಲ್ಲಿ ಮದ್ಯ ಸೇವಿಸಿ ಪುಂಚಾಲಕಾಡಿನಲ್ಲಿರುವ ಅಲ್ಬನ್ ಡಿಸೋಜನ ಮನೆಗೆ ತೆರಳಿದ್ದರೆನ್ನಲಾಗಿದೆ. ಅಲ್ಲಿ ಪೂರ್ವಾಹ್ನ 11 ಗಂಟೆ ಸುಮಾರಿಗೆ ಇವರಿಬ್ಬರ ನಡುವೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಈ ವೇಳೆ ಸಿಟ್ಟಿಗೆದ್ದ ಆರೋಪಿ ಅಲ್ಬನ್ ಕಟ್ಟಿಗೆಯಿಂದ ಹೊಡೆದು ಹೇಮಂತ್ ಪೂಜಾರಿಯನ್ನು ಕೊಲೆಗೈದಿರುವುದಾಗಿ ದೂರಲಾಗಿದೆ.

ಸಂಜೆಯ ವೇಳೆ ಈ ಕೊಲೆಯನ್ನು ಮುಚ್ಚಿ ಹಾಕಲು ಯತ್ನಿಸಿದ ಆರೋಪಿ ಅಲ್ಬನ್ ಡಿಸೋಜ ತನ್ನ ಮನೆಯ ಬಳಿ ಹೇಮಂತ್‌ರ ಮೃತದೇಹವನ್ನು ಕಟ್ಟಿಗೆಯನ್ನು ಬಳಸಿ ಸುಡಲು ಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ಈ ವೇಳೆ ಭಾರೀ ಹೊಗೆ ಹಾಗೂ ಸುಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳೀಯರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಮೃತದೇಹ ಅರ್ಧ ಸುಟ್ಟಿತ್ತೆನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಲ್ಬನ್ ಡಿಸೋಜನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳಕ್ಕೆ ಕಾಪು ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಶಿರ್ವ ಎಸ್ಸೈ ಭೇಟಿ ನೀಡಿದ್ದು ತನಿಖೆ ಮುಂದುವರಿಸಿದ್ದಾರೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News