ಅಂಚೆ ಇಲಾಖೆಯಿಂದ ವೆಬ್ಸೈಟ್ ಮೂಲಕ ರಾಖಿ ಕಳುಹಿಸುವ ವಿನೂತನ ಯೋಜನೆ
ಉಡುಪಿ, ಜು. 27: ಕೊರೋನ ಭೀತಿಯ ಹಿನ್ನೆಲೆಯಲ್ಲಿ ಮನೆಯಲ್ಲಿ ಕುಳಿತು ವೆಬ್ಸೈಟ್ ಮೂಲಕ ಸಹೋದರರಿಗೆ ರಾಖಿಯನ್ನು ಕಳುಹಿಸಿಕೊಡುವ ವಿನೂತನ ಯೋಜನೆಯನ್ನು ಅಂಚೆ ಇಲಾಖೆ ಜಾರಿಗೆ ತಂದಿದೆ.
ಆ.3ರಂದು ದೇಶದ್ಯಂತ ಆಚರಿಸುವ ರಕ್ಷಾ ಬಂಧನ ಪ್ರಯುಕ್ತ ಜನರು ಸುರಕ್ಷಿತವಾಗಿ ರಾಖಿ ಖರೀದಿಸಲು ಮತ್ತು ಅದನ್ನು ಸಂಬಂಧಪಟ್ಟವರಿಗೆ ತಲುಪಿಸಲು ಅಂಚೆ ಇಲಾಖೆ ಆನ್ಲೈನ್ www.karnatakapost. gov.in ರಾಖಿ ಪೋಸ್ಟ್ ಆರಂಭಿಸಿದೆ.
ಮನೆಯಲ್ಲಿ ಕುಳಿತು ರಾಜ್ಯದ ಗ್ರಾಹಕರು ಭಾರತದ ಯಾವುದೇ ಪ್ರದೇಶಕ್ಕೂ ರಾಖಿಯನ್ನು ತ್ವರಿತ ಅಂಚೆ ಮೂಲಕ ಸುಲಭವಾಗಿ ಕಳುಹಿಸಬಹುದು. ಗಡಿಯಲ್ಲಿ ಲಡಾಕ್ ಗಡಿ ಪ್ರದೇಶದಲ್ಲಿರುವ ಸೇನಾ ಯೋಧರಿಗೂ ರಾಖಿ ಲುಪಿಸುವ ಅವಕಾಶ ಕಲ್ಪಿಸಲಾಗಿದೆ.
ವೆಬ್ಸೈಟ್ ಲಾಗಿನ್ ಆಗಿ ಕಳುಹಿಸುವವರ ಪೂರ್ಣ ವಿವರಗಳನ್ನು ನೀಡಿ ಬಳಿಕ, ರಾಖಿ ಆಯ್ಕೆ ಮಾಡಿ ಸಹೋದರನ ವಿಳಾಸವನ್ನು ನೀಡಬೇಕಾಗಿದೆ. ರಾಖಿ ಕಳುಹಿಸಲು ಜು.31 ಕೊನೆಯ ದಿನವಾಗಿದೆ. ನೆಟ್ ಬ್ಯಾಂಕಿಂಗ್, ಇಲಾಖೆಯ ಐಪಿಪಿಬಿ, ಗೂಗಲ್ ಪೇ, ಭೀಮ್ ಆ್ಯಪ್, ಫೋನ್ ಪೇ ಇತರೆ ನೆಟ್ ಪೇಮೆಂಟ್ ವಿಧಾನದಲ್ಲಿ ಶುಲ್ಕ 100ರೂ. ಪಾವತಿಸಬಹುದಾಗಿದೆ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ತಿಳಿಸಿದ್ದಾರೆ.