ಮಳೆ ನೀರಿಗೆ ಸಿಲುಕಿ ಕೊಚ್ಚಿ ಹೋದ ಮಹಿಳೆ ಸಾವು
Update: 2020-08-17 14:45 GMT
ಕುಂದಾಪುರ, ಆ.17: ಸುರಿಯುತ್ತಿದ್ದ ಭಾರಿ ಗಾಳಿ-ಮಳೆಗೆ ಸಿಲುಕಿದ ಮಹಿಳೆ ಯೊಬ್ಬರು ಕಾಲು ಜಾರಿ ನೀರು ಹರಿಯುವ ಒಳಚರಂಡಿಗೆ ಬಿದ್ದು ಮೃತ ಪಟ್ಟ ಘಟನೆ ಕುಂದಾಪುರ ರಾಮ ಮಂದಿರ ರಸ್ತೆಯಲ್ಲಿ ರವಿವಾರ ಸಂಜೆ ಐದು ಗಂಟೆ ಸುಮಾರಿಗೆ ನಡೆದಿದೆ.
ಮೃತ ಪಟ್ಟ ಮಹಿಳೆಯನ್ನು ಕುಂದಾಪುರ ಕಸಬಾದ ಖಾರ್ವಿಕೇರಿ ರಸ್ತೆ ಕೃಷ್ಣ ಖಾರ್ವಿಎಂಬವರ ಪತ್ನಿ ಸುಜಾತ ಕೃಷ್ಣ ಖಾರ್ವಿ(43) ಎಂದು ಗುರುತಿಸಲಾಗಿದೆ. ಬೆಳಗ್ಗೆ ಕೆಲಸಕ್ಕೆ ತೆರಳಿದ್ದ ಇವರು ಸಂಜೆ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಮರಳುವಾಗ ಭಾರಿ ಗಾಳಿ ಮಳೆ ಸುರಿಯು ತಿದ್ದು, ಈ ಸಂದರ್ಭದಲ್ಲಿ ಗಾಳಿಯ ರಭಸಕ್ಕೆ ಸಿಲುಕಿದ ಸುಜಾತ ಕೊಡೆ ಸಹಿತ ಕಾಲು ಜಾರಿ ನೀರು ಹರಿಯುವ ಮೋರಿಗೆ ಉರುಳಿ ಬಿದ್ದು ನೀರಿನ ಸೆಳೆತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.