ರಸ್ತೆ ಅಪಘಾತ: ಗಾಯಾಳು ಐಟಿ ಉದ್ಯೋಗಿ ಮೃತ್ಯು
Update: 2020-08-25 15:34 GMT
ಶಿರ್ವ, ಆ.25: ಪಿಲಾರು ಗ್ರಾಮದ ಸೂಡಾ ದೇವಸ್ಥಾನದ ಗೋಪುರದ ಮುಂದೆ ತಿರುವು ರಸ್ತೆಯಲ್ಲಿ ಆ.22ರಂದು ರಾತ್ರಿ 11:30ರ ಸುಮಾರಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಐಟಿ ಸಂಸ್ಥೆಯ ಉದ್ಯೋಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಸೂಡಾ ನಿವಾಸಿ ಗೌರವ್ ಪುತ್ರನ್(27) ಎಂದು ಗುರುತಿಸ ಲಾಗಿದೆ. ಇವರು ಬೆಂಗಳೂರಿನ ಐಟಿ ಸಂಸ್ಥೆಯೊಂದರ ಉದ್ಯೋಗಿ ಯಾಗಿದ್ದು, ರಜೆಯ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರೆನ್ನಲಾಗಿದೆ. ಬೈಕ್ ಸವಾರ ಹರೀಶ್ ನೊಂದಿಗೆ ಕಾರ್ಕಳದಿಂದ ಸೂಡಾದಲ್ಲಿರುವ ಮನೆಗೆ ಬರುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿತ್ತೆನ್ನಲಾಗಿದೆ.
ಇದರಿಂದ ಗೌರವ್ ಪುತ್ರನ್ ಹಾಗೂ ಹರೀಶ್ ಗಾಯ ಗೊಂಡಿದ್ದರು. ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗೌರವ್ ಪುತ್ರನ್ ಆ.25ರಂದು ಬೆಳಗ್ಗೆ 11ಗಂಟೆಗೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.