‘ನಮ್ಮ ಮೆಟ್ರೋ’ದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ

Update: 2020-08-26 18:41 GMT

ಬೆಂಗಳೂರು, ಆ.26: ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಕನ್ನಡದ ಸಾಹಿತಿಗಳ ಸಂದೇಶಗಳನ್ನು ಪ್ರಚುರಪಡಿಸುವ ಮೂಲಕ ಬೆಂಗಳೂರು ಮೆಟ್ರೋ, ಕನ್ನಡ ಭಾಷೆಯ ಒಂದು ವಾಹಕವಾಗಿ ಕೆಲಸ ಮಾಡಬೇಕೆ ವಿನಃ ಹಿಂದಿಯನ್ನು ಹೇರುವ ವಕ್ತಾರರಾಗಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.

ಬುಧವಾರ ‘ನಮ್ಮ ಮೆಟ್ರೋ’ದಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಜಾಲ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುರ್ತು ಸಂದರ್ಭದಲ್ಲಿ ಬಳಸಲಾಗುವ ಬಾಗಿಲುಗಳ ಮೇಲೆ ಸಂಪೂರ್ಣವಾಗಿ ಹಿಂದಿಯನ್ನು ಬಳಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಕನ್ನಡದ ಇತಿಹಾಸ, ಪರಂಪರೆ, ಸಂಗೀತ, ಸಾಹಿತ್ಯವನ್ನು ಉತ್ತುಂಗಕ್ಕೇರಿಸುವ ನಿಟ್ಟಿನಲ್ಲಿ ನಮ್ಮ ಮೆಟ್ರೋದ ಜವಾಬ್ದಾರಿಯೂ ಇದೆ. ಮೆಟ್ರೋದಲ್ಲಿ ಓಡಾಡುವವರು ಕನ್ನಡಿಗರೇ ಆಗಿದ್ದಾರೆ ಮತ್ತು ರಾಜ್ಯದೊಳಗೆ ಇರುವ ಯಾವುದೇ ಸಂಸ್ಥೆಯು ರಾಜ್ಯ ಸರಕಾರದ ಭಾಷಾ ನೀತಿಯನ್ವಯ ಕಾರ್ಯನಿರ್ವಹಿಸುವುದು, ಈ ನೆಲದ ಕಾನೂನನ್ನು ಗೌರವಿಸುವುದು ಸಂಸ್ಥೆಯ ಕರ್ತವ್ಯ ಕೂಡ ಆಗಿದೆ ಎಂದು ಅವರು ಹೇಳಿದರು.

ಮೆಟ್ರೋ ಕಾಮಗಾರಿ ಸಂದರ್ಭದಲ್ಲಿ ಜಯದೇವ ಆಸ್ಪತ್ರೆ ಸಮೀಪದಲ್ಲಿ ಕನ್ನಡವನ್ನು ತಪ್ಪಾಗಿ ಬರೆಯಲಾಗಿದ್ದ ನಾಮಫಲಕವನ್ನು ಆನ್‍ಲೈನ್‍ನಲ್ಲಿ ಪ್ರದರ್ಶಿಸಿ, ಇವೆಲ್ಲ ಗೂಗಲ್ ಅನುವಾದದ ಅಚಾತುರ್ಯಗಳು. ಹೀಗೆ ಮಾಡುವುದರಿಂದ ಕನ್ನಡದ ನೆಲದಲ್ಲಿಯೇ ಕನ್ನಡವನ್ನು ಅವಮಾನಿಸಿದಂತಾಗುತ್ತದೆ. ಹಾಗಾಗಿ ಈ ನೆಲದಲ್ಲಿ ಸಾಕಷ್ಟು ಮಂದಿ ತಜ್ಞರು, ಅನುವಾದಕರು ಇದ್ದಾರೆ. ಅವರ ಸಲಹೆ ಪಡೆದು ನಾಮಫಲಕವನ್ನು ಅಳವಡಿಸುವಂತೆ ನಾಗಾಭರಣ ತಾಕೀತು ಮಾಡಿದರು.

ಕನ್ನಡೀಗರಿಗೇ ಉದ್ಯೋಗ ನೀಡಿ: ಮೆಟ್ರೋ ಸಂಸ್ಥೆಯಲ್ಲಿ ಬಹುಮುಖ್ಯವಾಗಿ ಸ್ವಚ್ಛತಾ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಗಳು ಅನ್ಯರಾಜ್ಯದವರಿರುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾಕಷ್ಟು ದೂರುಗಳು ಬಂದಿವೆ. ಉತ್ತರ ಕರ್ನಾಟಕದವರು ಸೇರಿದಂತೆ ನಮ್ಮ ರಾಜ್ಯದ ಸಾಕಷ್ಟು ಮಂದಿ ಕೆಲಸವಿಲ್ಲದೆ ತೊಂದರೆಗೆ ಸಿಲುಕಿರುವಾಗ ನೀವು ಅನ್ಯರಾಜ್ಯದವರಿಗೆ ಕೆಲಸ ನೀಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಹೊರಗುತ್ತಿಗೆ ನೌಕರರನ್ನು ಒದಗಿಸುವವರಿಗೆ ಕನ್ನಡಿಗರನ್ನೇ ಕರೆತರುವಂತೆ ಷರತ್ತು ವಿಧಿಸಬೇಕಿದೆ. ಯಾವುದೇ ಕಾರಣಕ್ಕೂ ಇನ್ನು ಮುಂದೆ ಹೀಗಾಗದಂತೆ ಎಚ್ಚರವಹಿಸಬೇಕು ಮತ್ತು ಕನ್ನಡದ ನೆಲದಲ್ಲಿ ಹಿಂದಿ ಹೇರಿಕೆಯನ್ನು ಕನ್ನಡಿಗರು ಎಂದಿಗೂ ಸಹಿಸುವುದಿಲ್ಲ ಎಂಬುದನ್ನು ತಾವು ಮನಗಾಣಬೇಕಿದೆ ಎಂದು ಬೆಂಗಳೂರು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್‍ಗೆ ನಾಗಾಭರಣ ಎಚ್ಚರಿಕೆ ನೀಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಇನ್ನು ಮುಂದೆ ಯಾವುದೇ ಕಾರಣಕ್ಕೂ ಗೂಗಲ್ ಅನುವಾದವನ್ನು ಬಳಸುವುದಿಲ್ಲ. ನಮ್ಮ ಮೆಟ್ರೋದಲ್ಲಿ ಕರ್ನಾಟದವರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಗಮನಹರಿಸಲಾಗುವುದು ಮತ್ತು ಕನ್ನಡ ಭಾಷೆ, ಪರಂಪರೆಯನ್ನು ಹಂಚುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇವೆ ಮತ್ತು ಸಭೆಯಲ್ಲಿ ಚರ್ಚಿತವಾಗಿರುವ ಎಲ್ಲ ಲೋಪದೋಷಗಳನ್ನು ನವೆಂಬರ್ ಒಳಗೆ ಸರಿಪಡಿಸಿಕೊಂಡು ತಮಗೆ ವರದಿ ನೀಡವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿಯ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ವೆಬ್ ಪೋರ್ಟಲ್ ಯೋಜನಾಧಿಕಾರಿ ಸತೀಶ್, ನಿರ್ದೇಶಕರಾದ ಎನ್.ಎಂ.ದೋಕೆ, ಡಿ.ರಾಧಾಕೃಷ್ಣ ರೆಡ್ಡಿ, ಕಾರ್ಯಕಾರಿ ನಿರ್ದೇಶಕರಾದ ಎ.ಎಸ್. ಶಂಕರ್, ಎಸ್.ಎಸ್. ಹೆಗರೆಡ್ಡಿ, ಎಂ.ಎಸ್. ಚನ್ನಪ್ಪ ಗೌಡರ್, ಬಿ.ಎಸ್.ಪತ್ರಿ, ಚೌವಾಣ್ ಬಿ.ಎಲ್.ವೈ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News