ರೊ-ರೊ ರೈಲು ಸೇವೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ನಿಶಾನೆ

Update: 2020-08-30 13:23 GMT

ಬೆಂಗಳೂರು, ಆ. 30: ಇಲ್ಲಿನ ನೆಲಮಂಗಲ ರೈಲ್ವೆ ನಿಲ್ದಾಣದಿಂದ ಸೋಲಾಪುರದ ಬಾಲೆ ರೈಲ್ವೆ ನಿಲ್ದಾಣದ ನಡುವೆ ಸಂಚರಿಸಲಿರುವ ರೊ-ರೊ(ರೋಲ್ ಆನ್ ರೋಲ್ ಆಫ್ ರೈಲು) ರೈಲು ಸೇವೆಯ ಚೊಚ್ಚಲ ಪ್ರಯಾಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ರವಿವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ದಾರೆ.

ರವಿವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನೂತನ ರೈಲ್ವೆ ಸೇವೆಗೆ ಹಸಿರು ನಿಶಾನೆ ತೋರಿಸಿದ ಬಳಿಕ ಮಾತನಾಡಿದ ಅವರು, ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಾರಿಗೆ ಪ್ರಕಾರಗಳನ್ನು ಒಗ್ಗೂಡಿಸುವ ಮಲ್ಟಿ ಮಾಡೆಲ್ ಟ್ರಾನ್ಸ್‍ಪೋರ್ಟ್ ಸಿಸ್ಟಂ ಅನ್ನು ನಿರಂತರವಾಗಿ ಪ್ರತಿಪಾದಿಸಿದ್ದಾರೆ. ಅವರ ಆಶಯದ ಫಲವಾಗಿ ಈ ರೊ-ರೊ ಸೇವೆ ಆರಂಭಗೊಳ್ಳುತ್ತಿದೆ ಎಂದು ನೆನಪಿಸಿಕೊಂಡರು.

ಸರಕು ಸಾಮಾನು ಸಹಿತವಾದ ಅಥವಾ ಖಾಲಿ ಇರುವ 42 ಟ್ರಕ್‍ಗಳನ್ನು ಈ ರೊ-ರೊ ರೈಲಿನ ಮೇಲೆ ಲೋಡ್ ಮಾಡಿ ಸಾಗಿಸಬಹುದಾಗಿದೆ. ನೆಲಮಂಗಲ ಹಾಗೂ ಬಾಲೆಯಲ್ಲಿ ಈ ಟ್ರಕ್‍ಗಳನ್ನು ರೈಲಿಗೆ ಹತ್ತಿಸುವ ಹಾಗೂ ರೈಲಿಗೆ ಇಳಿಸುವಂತಹ ಕಾರ್ಯ ನಡೆಯುತ್ತದೆ. ರಸ್ತೆ ಮೂಲಕ ಸಂಚರಿಸುವ ಟ್ರಕ್‍ಗಳನ್ನು ರೈಲಿನ ಮೂಲಕ ಸಾಗಿಸುವ ಮೂಲಕ ಕ್ಷಿಪ್ರವಾಗಿ ಟ್ರಕ್‍ಗಳನ್ನು ಹಾಗೂ ಸರಕು ಸಾಮಗ್ರಿಗಳನ್ನು ಈ 2 ನಗರಗಳ ನಡುವೆ ಸಾಗಾಣಿಕೆ ಮಾಡಬಹುದಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಗೋದಾಮುಗಳಿಂದ ಅಥವಾ ಮಾರುಕಟ್ಟೆಯಿಂದ ಲೋಡ್ ಆದಂತಹ ಟ್ರಕ್‍ಗಳು ರೈಲ್ವೆ ನಿಲ್ದಾಣದಲ್ಲಿ ಬಂದು ರೈಲಿನಲ್ಲಿ ಲೋಡ್ ಆಗುತ್ತವೆ. ರೈಲುಗಳ ಮೂಲಕ ಈ ಟ್ರಕ್‍ಗಳು ಮತ್ತೊಂದು ನಗರಕ್ಕೆ ಬಂದು ಸಾಮಾನು ಸರಂಜಾಮುಗಳೊಂದಿಗೆ ಗೋದಾಮು ಅಥವಾ ಮಾರುಕಟ್ಟೆಗೆ ಹೋಗಿ ಹೊತ್ತು ತಂದ ಸಾಮಾನುಗಳನ್ನು ಅನ್‍ಲೋಡ್ ಮಾಡಲು ಈ ವ್ಯವಸ್ಥೆಯಿಂದ ಸಹಕಾರಿಯಾಗುತ್ತದೆ ಎಂದು ಯಡಿಯೂರಪ್ಪ ನುಡಿದರು.

ಇಂತಹ ಒಂದು ರೊ-ರೊ ರೈಲಿನಲ್ಲಿ ಸರಕು ಹಾಗೂ ಟ್ರಕ್‍ಗಳೆರಡರ ಭಾರವು ಸೇರಿ 1,260 ಟನ್ ಭಾರವನ್ನು ಸಾಗಿಸಬಹುದಾಗಿದೆ. ಈ ವ್ಯವಸ್ಥೆ ಪರಿಸರ ಸ್ನೇಹಿಯಾಗಿದ್ದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಹಾಗೂ ಟ್ರಕ್‍ಗಳ ದೀರ್ಘಬಾಳಿಕೆಗೆ ಸಹಕಾರಿಯಾಗುತ್ತದೆ. ಬೆಂಗಳೂರಿನಿಂದ ತರಕಾರಿ, ತೆಂಗಿನಕಾಯಿ, ಅಡಿಕೆ ಸೇರಿ ತೋಟಗಾರಿಕೆ ಉತ್ಪನ್ನಗಳು, ಕೈಗಾರಿಕಾ ಉತ್ಪನ್ನಗಳನ್ನು ಸೋಲಾಪುರಕ್ಕೆ ಸಾಗಿಸಲು ಹಾಗೂ ಸೋಲಾಪುರದಿಂದ ಈರುಳ್ಳಿ, ಬೇಳೆಕಾಳುಗಳು ಸಹಿತ ಮುಂತಾದ ಸರಕುಗಳನ್ನು ಬೆಂಗಳೂರಿಗೆ ಸಾಗಿಸಲು ಇದರಿಂದ ನೆರವಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.

ನೆಲಮಂಗಲದ ಹತ್ತಿರ ಇರುವ ಎಪಿಎಂಸಿ ಮಾರುಕಟ್ಟೆ, ಪೀಣ್ಯ ಹಾಗೂ ನೆಲಮಂಗಲ ಭಾಗದಲ್ಲಿರುವ ಅನೇಕ ಕೈಗಾರಿಕೆಗಳು ಹಾಗೂ ಸಾರಿಗೆ ಸಂಸ್ಥೆಗಳು ಇದರಿಂದ ಅನುಕೂಲ ಹೊಂದಲಿವೆ. ಈ ಮೊದಲು ಕೊಂಕಣ್ ರೈಲ್ವೆ ಪ್ರದೇಶದಲ್ಲಿ ಸಂಚರಿಸುತ್ತಿದ್ದ ರೊ-ರೊ ಸೇವೆಯನ್ನು ಬೆಂಗಳೂರು ಮತ್ತು ಸೋಲಾಪುರದ ಮಧ್ಯೆ ಆರಂಭಿಸುತ್ತಿರುವುದಕ್ಕೆ ನಾನು ರೈಲ್ವೆ ಇಲಾಖೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ನುಡಿದರು.

ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ, ಕಂದಾಯ ಸಚಿವ ಆರ್.ಅಶೋಕ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ್ ಸೇರಿದಂತೆ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News