ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ದೇವಿದಾಸ್ ನಾಯ್ಕ ಅಧಿಕಾರ ಸ್ವೀಕಾರ
ಉಡುಪಿ, ಆ.31: ಎಂಜಿಎಂ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಕಾಲೇಜಿನ ಆಂಗ್ಲ ವಿಭಾಗ ಮುಖ್ಯಸ್ಥ ಡಾ. ದೇವಿದಾಸ್ ಎಸ್. ನಾಯ್ಕ ಅಧಿಕಾರ ವಹಿಸಿಕೊಂಡಿದ್ದಾರೆ.
1988ರಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸೇರಿದ ಡಾ. ನಾಯ್ಕ, 27 ವರ್ಷ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು, ಅಲ್ಪಾವಧಿಗೆ ಮುಲ್ಕಿ ವಿಜಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಮುಂದೆ ಒಂದೂವರೆ ವರ್ಷ ಶೃಂಗೇರಿ ಜೆ.ಸಿ.ಬಿ.ಎಂ. ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಇವರು, 2017ರಲ್ಲಿ ಎಂಜಿಎಂ ಕಾಲೇಜಿಗೆ ವರ್ಗಾವಣೆ ಗೊಂಡರು. ಕಳೆದ ಮೂರು ವರ್ಷ ಗಳಿಂದ ಇಲ್ಲಿ ಅವರು ಆಂಗ್ಲ ವಿಭಾಗದ ಮುಖ್ಯಸ್ಥರಾಗಿದ್ದಾರೆ.
‘ಭಾರತೀಯ ಆಂಗ್ಲ ಕಾದಂಬರಿಯಲ್ಲಿ ರಾಜಕೀಯ ಸಿದ್ಧಾಂತ’ ಎಂಬ ವಿಷಯದ ಮೇಲೆ 2011ರಲ್ಲಿ ಶಿವಮೊಗ್ಗ ಕುವೆಂಪು ವಿವಿಯಿಂದ ಪಿಎಚ್ಡಿ ಪದವಿ ಪಡೆದಿದ್ದಾರೆ. ಇವರು ಮಂಗಳೂರು ವಿವಿ ಮಟ್ಟದ ಅತ್ಯುತ್ತಮ ಎನ್ನೆಸ್ಸೆಸ್ಸ್ ಅಧಿಕಾರಿ ಪ್ರಶಸ್ತಿ ಪಡೆದಿದ್ದಾರೆ. ಸಾಹಿತ್ಯ, ಸಂಗೀತ, ರಂಗ ಭೂಮಿ, ಯಕ್ಷಗಾನ ಕಲಾವಿದ, ಲೇಖಕರಾಗಿರುವ ಇವರು ಮದ್ದಲೆ ವಾದನ, ಹೊನ್ನ ಹರಿವಾಣ ಕೃತಿ ಪ್ರಕಟಿಸಿದ್ದಾರೆ.