ಕಲ್ಕೂರ ಪ್ರತಿಷ್ಠಾನದಿಂದ ಸೆ.10ರಂದು ‘ಶ್ರೀಕೃಷ್ಣ ವೇಷ ಸ್ಪರ್ಧೆ’

Update: 2020-09-02 10:09 GMT

ಮಂಗಳೂರು, ಸೆ.2: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ಆಯೋಜಿಸಲಾಗುವ ರಾಷ್ಟೀಯ ಮಕ್ಕಳ ಉತ್ಸವ ‘ಶ್ರೀಕೃಷ್ಣ ವೇಷ ಸ್ಪರ್ಧೆ’ಯನ್ನು ಈ ಬಾರಿ ಕೊರೋನ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ನಡೆಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸೆ.10ರಂದು ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಸ್ಪರ್ಧಿ ಮಕ್ಕಳ 3 ನಿಮಿಷಗಳ ಕೃಷ್ಣ ವೇಷ ಸ್ಪರ್ಧೆಯ ವೀಡಿಯೋವನ್ನು ಮನೆಯಿಂದಲೇ ಚಿತ್ರೀಕರಿಸಿ ಸೆ.7ರೊಳಗೆ ಆಯಾ ವಿಭಾಗಕ್ಕೆ ಒದಗಿಸಲಾಗಿರುವ ಇ ಮೇಲ್ ಮೂಲಕ ಕಳುಹಿಸಬಹುದಾಗಿದೆ ಎಂದರು.

ಇದಕ್ಕಾಗಿ ಪ್ರತಿ ವಿಭಾಗಕ್ಕೆ ಪ್ರತ್ಯೇಕ ಇಮೇಲ್ ಐಡಿ ನೀಡಲಾಗಿದ್ದು, ಕನಿಷ್ಠ 30 ಸೆಕೆಂಡ್‌ನಿಂದ ಗರಿಷ್ಠ 3 ನಿಮಿಷದೊಳಗಿನ ವೀಡಿಯೋವನ್ನು ಕಳುಹಿಸಬೇಕು. ಸೆ.10ರಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ‘ನಮ್ಮ ಕುಡ್ಲ ಚಾನೆಲ್’ನಲ್ಲಿ ನೇರ ಪ್ರಸಾರದಲ್ಲಿ ವಿಜೇತ ಮಕ್ಕಳ ವೀಡಿಯೋ ಪ್ರಸಾರ ಮಾಡಲಾಗುವುದು ಎಂದು ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.

ಪ್ರತಿ ವರ್ಷ ಕದ್ರಿ ಮಂಜುನಾಥ ಕ್ಷೇತ್ರದ ಆವರಣದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿತ್ತು. ಕೋವಿಡ್‌ನಿಂದಾಗಿ ಈ ಬಾರಿ ಅಸಾಧ್ಯವಾಗಿದೆ. ಆದರೆ ಈ ಬಾರಿ ಮನೆಗಳಲ್ಲಿಯೇ ಹೆತ್ತವರು, ಮನೆ ಮಂದಿಯೆಲ್ಲಾ ಜತೆಯಾಗಿ ಚಿತ್ರೀಕರಣವನ್ನು ಅವರಿಗೆ ಇಷ್ಟದ ರೀತಿಯಲ್ಲಿ ಮಾಡಲು ಸಾಧ್ಯವಾಗಲಿದೆ ಎಂದವರು ಹೇಳಿದರು.

ತೊಟ್ಟಿಲ ಕೃಷ್ಣ, ವೃಕ್ಷ ಕೃಷ್ಣ ಈ ಬಾರಿಯ ವಿಶೇಷ ವಿಭಾಗ!

ಈ ಬಾರಿ ತೊಟ್ಟಿಲ ಹಬ್ಬದ ಸಂಭ್ರಮದಲ್ಲಿರುವ ಮಗುವಿಗೆ ಸಾಧಾರಣ ಕೃಷ್ಣನ ವೇಷ ಹಾಕಿಸಿ ವೀಡಿಯೋ ಮಾಡುವ ಅವಕಾಶವಿದೆ. ಇದೇ ವೇಳೆ ಕೃಷ್ಣ ವ ವೇಷಧಾರಿಯೊಂದಿಗೆ ಮನೆಮಂದಿಯೆಲ್ಲಾ ಸೇರಿ ಮರ, ಗಿಡ ನೆಡುವ ವೀಡಿಯೋ ಮೂಲಕ ವೃಕ್ಷ ಕೃಷ್ಣ ಸ್ಪರ್ಧೆಯನ್ನೂ ಅಳವಡಿಸಲಾಗಿದೆ ಎಂದು ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.

ಇದಲ್ಲದೆ ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀಕೃಷ್ಣ ಸೇರಿದಂತೆ ಒಟ್ಟು 32 ವಿಭಾಗಗಳಲ್ಲಿ ವಿವಿಧ ವಯೋಮಾನದ ಮಕ್ಕಳ ಸ್ಪರ್ಧೆ ನಡೆಯಲಿದೆ. ವಿಶ್ವಾದ್ಯಂತ ಮಕ್ಕಳು ಕೃಷ್ಣ ವೇಷಧಾರಿಯಾಗಿ ಭಾಗವಹಿಸಬಹುದು. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0824- 2492239, 9845083736ನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೌಶಿಕ್ ಕಲ್ಲೂರಾಯ, ಕದ್ರಿ ನವನೀತ ಶೆಟ್ಟಿ, ದಯಾನಂದ, ಜಿ.ಕೆ. ಭಟ್ ಸೇರಾಜೆ, ವಿಜಯಲಕ್ಷ್ಮೀ, ರತ್ನಾಕರ ಜೈನ್, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News