ಗೌರಿ ಸಾವು ಸಾವಲ್ಲ: ಸಹೋದರಿಯನ್ನು ನೆನೆದು ಭಾವುಕರಾದ ಇಂದ್ರಜಿತ್ ಲಂಕೇಶ್
Update: 2020-09-03 15:21 GMT
ಬೆಂಗಳೂರು, ಸೆ.3: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಕುರಿತು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ಬಗೆಗಿನ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಸಿನಿಮಾ ನಿರ್ದೇಶಕ, ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಭಾವುಕರಾದ ಪ್ರಸಂಗ ಜರುಗಿತು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಕ್ಕ, ತಂದೆ ಕೊನೆಯ ಗಳಿಗೆವರೆಗೂ ಬರೆಯುತ್ತಲೇ ಸಾವನ್ನಪ್ಪಿದ್ದಾರೆ. ಗೌರಿ ಸಾವು ಸಾವಲ್ಲ. ನಮ್ಮ ತಂದೆ ಹಾಗೂ ನಮ್ಮ ಅಕ್ಕ ಕೊನೆಯ ಗಳಿಗೆವರೆಗೂ ಮಾಧ್ಯಮಕ್ಕೆ ಸೇವೆ ಮಾಡಿದ್ದಾರೆ ಎಂದು ನುಡಿದರು.
ಗೌರಿ ಲಂಕೇಶ್ ಒಂದು ಸಿದ್ಧಾಂತಕ್ಕಾಗಿ ಸಾವು ಅನುಭವಿಸಬೇಕಿತ್ತಾ ಎಂದ ಅವರು, ಹತ್ಯೆ ಪ್ರಕರಣವನ್ನು ಭೇದಿಸಿದ ಸಿಟ್(ವಿಶೇಷ ತನಿಖಾ ದಳ) ತನಿಖಾಧಿಕಾರಿಗಳಿಗೆ ಅಭಿನಂದನೆಗಳು. ಅದೇ ರೀತಿ, ವಿಚಾರವಾದಿಗಳಾದ ನರೇಂದ್ರ ದಾಬೋಲ್ಕರ್ ಹಾಗೂ ಡಾ.ಎಂ.ಎಂ.ಕಲಬುರಗಿ ಅವರ ಹಂತಕರ ಬಂಧನ ಆಗಬೇಕು ಎಂದು ಒತ್ತಾಯಿಸಿದರು.