ಮಂಗಳೂರು : ಶಕ್ತಿ ಶಿಕ್ಷಣ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ

Update: 2020-09-05 11:14 GMT

ಮಂಗಳೂರು : ಶಕ್ತಿನಗರದ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿನ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಿವೃತ್ತ ಶಿಕ್ಷಕ, ಸಮಾಜಶಾಸ್ತ್ರ ಲೇಖಕರಾದ ಡಾ. ಚ.ನಾ ಶಂಕರ್ ರಾವ್ ಹಾಗೂ ಸಂತ ಆಗ್ನೇಸ್ ಕಾಲೇಜಿನ ನಿವೃತ್ತ ಉಪನ್ಯಾಸಕಿ ಡಾ. ಸರಸ್ವತಿ ರಾವ್ ಇವರಿಗೆ ಸನ್ಮಾನವನ್ನು ಮಾಡಲಾಯಿತು.

ಸನ್ಮಾನ ಸ್ವಿಕರಿಸಿ ಮಾತನಾಡಿದ ಡಾ. ಚ.ನಾ ಶಂಕರ್ ರಾವ್ ಸಾಧಕರನ್ನು ಗುರುತಿಸುವುದು ಭಾರತೀಯ ಪರಂಪರೆ, ಅದೇ ರೀತಿ ವಂದನೆಯು ನಮ್ಮ ಸನಾತನ ಸಂಸ್ಕೃತಿಯೂ ಹೌದು. ಅದರೊಂದಿಗೆ ಒಳ್ಳೆಯ ಕೆಲಸ, ಸಮಾಜ ಸೇವೆಗಳನ್ನು ಮಾಡುತ್ತಿರುವ ಸಾಧಕರನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ದಕ್ಷಿಣ ಕನ್ನಡ ಜಿಲ್ಲೆಯು ನಿರಂತರವಾಗಿ ಮಾಡುತ್ತಿದೆ ಎಂದು ಡಾ. ಸಿ ಎನ್ ಶಂಕರ್ ರಾವ್ ಹೇಳಿದರು.

ನಿರಂತರ ಕ್ರಿಯಾಶೀಲತೆಯ ಮೂಲಕ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಆ ಮೂಲಕ ದೇಹ ಮತ್ತು ಮನಸ್ಸನ್ನು ಆರೋಗ್ಯದಿಂದ ಇರಿಸಲು ಸಾಧ್ಯವಿದೆ. ಅಂತಹ ಕ್ರಿಯಾಶೀಲತೆಯನ್ನು ಶಿಕ್ಷಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು. ಮರದ ಕೊಠಡಿಗೂ ಜೀವ ತುಂಬುವ ಶಕ್ತಿ ಒಬ್ಬ ಗುರುವಿಗೆ ಇದೆ. ಆದರೆ ಗುರು ಅವನಲ್ಲಿರುವ ಶಕ್ತಿ, ಸಾಮರ್ಥ್ಯ ಗಳನ್ನು ಗುರುತಿಸಬೇಕು ಮತ್ತು ಅದರ ಬೆಳವಣಿಗೆ ಪ್ರೇರಣೆ ನೀಡಬೇಕು ಎಂದರು.

ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ ಡಾ. ಸರಸ್ವತಿ ಸಭೆಯನ್ನುದ್ದೇಶಿಸಿ, ಶಿಕ್ಷಕ ವೃತ್ತಿ ಎನ್ನುವುದು ದೇವರ ಸೇವೆ ಇದ್ದಂತೆ. ನಮ್ಮ ಕಾರ್ಯ ಸಾಧನೆಗೆ ನಾವು ಎಷ್ಟು ಭಕ್ತಿಯಿಂದ ದೇವರನ್ನು ಪ್ರಾರ್ಥಿಸುತ್ತೇವೋ ಅದೇ ರೀತಿ ಶಿಕ್ಷಕರು ತಮ್ಮ ಶಿಕ್ಷಣಸಂಸ್ಥೆ ಹಾಗೂ ವಿದ್ಯಾರ್ಥಿ ಗಳನ್ನು ಪ್ರೀತಿಯಿಂದ, ಶ್ರದ್ಧೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಕಾಣಬೇಕು ಹಾಗಾದಾಗ ಮಾತ್ರ ವಿದ್ಯಾರ್ಥಿಗಳು ಕಲಿಸುವ ಪಾಠವನ್ನು ಅರ್ಥೈಸುವರು ಮತ್ತು ಶಿಕ್ಷಣ ಸಂಸ್ಥೆಯೂ ಅಂತಹ ಶಿಕ್ಷಕರನ್ನು ನೆನಪಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 2019-2020ನೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜು 100% ಫಲಿತಾಂಶ ಗಳಿಸಿದ್ದು, ಈ ಸಾಧನೆಗೆ ಸತತ ಪರಿಶ್ರಮದೊಂದಿಗೆ ಕಾರ್ಯನಿರ್ವಹಿಸಿದ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ಎಜ್ಯುಕೇಶನ್ ಟ್ರಸ್ಟ್ ನ ಆಡಳಿತಾಧಿಕಾರಿ ಡಾ. ಕೆ.ಸಿ ನಾಯ್ಕ್ ಮಾತನಾಡಿ, ನಾವು ಮಾತೃಭಾಷೆಗೆ ಇನ್ನು ಮುಂದೆ ಹೆಚ್ಚು ಒತ್ತು ಕೊಡಬೇಕು. ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ನಾವು ಮರೆಯಬಾರದು. ಇತರೆ ಭಾಷೆಗಳನ್ನು ನಾವು ದ್ವೇಷಿಸಬಾರದು. ಹೊಸ ಶಿಕ್ಷಣ ನೀತಿಯು ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ಮಾಡಬಹುದೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ನಮ್ಮ ಸಂಸ್ಥೆಯ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಒಂದು ಕುಟುಂಬ. ನಾವೆಲ್ಲರೂ ಪ್ರತಿ ವಿಷಯದಲ್ಲಿ ಉನ್ನತೀಕರಣವಾಗಬೇಕು. ವಿದ್ಯಾರ್ಥಿಗಳಿಗೂ ತಮ್ಮ ಜ್ಞಾನವನ್ನು ನೀಡುವುದರ ಮೂಲಕ ಅವರ ಪ್ರಗತಿಗೆ ಕಾರಣೀ ಭೂತರಾಗಬೇಕೆಂದು ಕರೆ ನೀಡಿದರು. ಸನ್ಮಾನಿತರಾದ ಡಾ. ಚ.ನಾ. ಶಂಕರರಾವ್ ಹಾಗೂ ಡಾ. ಸರಸ್ವತಿ ರಾವ್ ಇವರ ಸಾಧನೆಗೆ ಅಭಿನಂದನೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್ ನ ಪ್ರಧಾನ ಸಲಹೆಗಾರ ರಮೇಶ್ ಕೆ, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ ಎಸ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ ಕಾಮತ್, ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು. ಉಪನ್ಯಾಸಕಿ ಶೀಲ್ಪಾ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಲಿಜಿನ್ ಮತ್ತು ಉಪನ್ಯಾಸಕಿ ಶ್ರೀಲೇಖ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಹೇಳಿದರು. ಪ್ರಖ್ಯಾತ್ ರೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News