ಎನ್‍ಇಪಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ: ನಿವೃತ್ತ ನ್ಯಾ.ನಾಗಮೋಹನ್‍ ದಾಸ್

Update: 2020-09-12 17:08 GMT

ಬೆಂಗಳೂರು, ಸೆ.12: ಹೊಸ ಶಿಕ್ಷಣ ನೀತಿ ಗುಣಾತ್ಮಕ ಶಿಕ್ಷಣವನ್ನು ಕಲ್ಪಿಸುವಲ್ಲಿ ವಿಫಲವಾಗಿದೆ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‍ ದಾಸ್ ಹೇಳಿದ್ದಾರೆ.

ಶನಿವಾರ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‍ಎಫ್‍ಐ) ವತಿಯಿಂದ ಆನ್‍ಲೈನ್‍ನಲ್ಲಿ ಆಯೋಜಿಸಿದ್ದ ಶಾಲಾಪೂರ್ವ ಶಾಲಾ ಶಿಕ್ಷಣ ಕುರಿತು ಎನ್‍ಇಪಿ ಹೇಳುವುದೇನು ಎಂಬುದರ ಕುರಿತ ವೆಬಿನಾರ್ ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಸರಕಾರ ಜಾರಿ ಮಾಡಲು ಮುಂದಾಗಿರುವ ಹೊಸ ಶಿಕ್ಷಣ ನೀತಿಯು ದೇಶದಲ್ಲಿ ಅಸಮಾನತೆಯನ್ನು ಹೋಗಲಾಡಿಸುತ್ತದೆ ಎಂಬ ನಿರೀಕ್ಷೆಯಿತ್ತು. ಅದು ಎಲ್ಲ ಜಾತಿ, ಧರ್ಮ, ವರ್ಗದವರಿಗೆ ಒಂದೇ ರೀತಿಯ ಶಿಕ್ಷಣ ನೀಡುವ ವ್ಯವಸ್ಥೆ ಆಗಬೇಕಿತ್ತು. ಆದರೆ, ಈ ನೀತಿಯು ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿದ್ದು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದರು,

ಇಂದು ದೇಶದಲ್ಲಿ ಶೇ.70 ರಷ್ಟು ಶಿಕ್ಷಿತರಿದ್ದು, ಶೇ.20 ರಷ್ಟು ಜನರು ಉನ್ನತ ಶಿಕ್ಷಣಕ್ಕೆ ಅವಕಾಶ ಸಿಗುತ್ತಿದೆ. ದೇಶದಲ್ಲಿಂದು ಶಿಕ್ಷಿತರಾಗಿರುವವರ ಪೈಕಿ ಶೇ.90 ರಷ್ಟು ಜನರು ಕಾನೂನಿನ ಅನಕ್ಷರಸ್ಥರಾಗಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿಂದು ಒಬ್ಬ ಮನುಷ್ಯ ಮಾನವನನ್ನಾಗಿ ಮಾಡುವ ಶಿಕ್ಷಣದ ಅಗತ್ಯವಿದೆ. ಅಲ್ಲದೆ, ದೇಶಪ್ರೇಮಿಯಾಗುವ, ವಿಶ್ವಮಾನವನನ್ನಾಗಿ ರೂಪಿಸುವ ಶಿಕ್ಷಣ ಬೇಕಿದೆ ಎಂದು ತಿಳಿಸಿದರು.

ನಮ್ಮ ಶಿಕ್ಷಣದಲ್ಲಿ ರಾಜ್ಯ ಹಾಗೂ ದೇಶವನ್ನು ಕಾಡುತ್ತಿರುವ ಸಮಸ್ಯೆಗಳನ್ನು, ಭ್ರಷ್ಟಾಚಾರ, ಡ್ರಗ್ಸ್, ಕೋಮುವಾದ, ಜಾತಿವಾದ ಹೀಗೆ ಎಲ್ಲವನ್ನು ಹಿಮ್ಮೆಟ್ಟಿಸುವಂತಹ ಯುವ ಪೀಳಿಗೆ ಕಟ್ಟಬೇಕಾದಂತಹ ಶಿಕ್ಷಣ ಬೇಕಿದೆ. ಆದರೆ, ಹೊಸ ಶಿಕ್ಷಣ ನೀತಿಯಲ್ಲಿ ಸಂವಿಧಾನದ ಆಶಯವಾದ ಸಾಮಾಜಿಕ ನ್ಯಾಯ, ಜಾತ್ಯತೀತ, ಬಹುತ್ವದ ಮೌಲ್ಯಗಳನು ಬಿತ್ತಿ ಬೆಳೆಸುವ ಹೊಸ ಪ್ರಯತ್ನ ಕಾಣುತ್ತಿಲ್ಲ ಎಂದು ಹೇಳಿದರು.

ಕೇಂದ್ರ ಸರಕಾರವು ಹಲವು ಚಿಂತಕರು, ಸಂಘ-ಸಂಸ್ಥೆಗಳು ಹೊಸ ಶಿಕ್ಷಣ ನೀತಿಗೆ ವಿರುದ್ಧವಾಗಿ ತಕರಾರು ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದೆ. ಅದರ ನಡುವೆಯೂ ಸರಕಾರ ಏಕಾಏಕಿ ಈ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಅಲ್ಲದೆ, ಈ ಸಂಬಂಧ ಸಂಸತ್ತಿನಲ್ಲಿ ಚರ್ಚೆಯನ್ನೂ ಮಾಡಲಿಲ್ಲ, ರಾಜ್ಯಗಳ ಅಭಿಪ್ರಾಯವನ್ನೂ ಪರಿಗಣಿಸಿಲ್ಲ. ಈ ಹೊಸ ನೀತಿಯಲ್ಲಿ ಶಿಕ್ಷಣ ಕೇತ್ರದ ಸಂಬಂಧ ರಾಜ್ಯಗಳಿಗಿರುವ ಅಧಿಕಾರವನ್ನು ಮೊಟಕುಗೊಳಿಸಿ, ಕೇಂದ್ರೀಕರಣ ಮಾಡಲು ಹೊರಟಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಮಾರಕವಾದುದಾಗಿದೆ ಎಂದರು.

ಹೊಸ ಶಿಕ್ಷಣ ನೀತಿಯ ಸಂಬಂಧ ತಮಿಳುನಾಡು ಅದನ್ನು ಮತ್ತೊಮ್ಮೆ ಸ್ಪಷ್ಟೀಕರಿಸಬೇಕು ಎಂದಿದೆ. ಪಶ್ಚಿಮ ಬಂಗಾಳ ಹಾಗೂ ಕೇರಳ ರಾಜ್ಯಗಳು ಜಾರಿ ಮಾಡಲು ಸಾಧ್ಯವಾಗಲ್ಲ ಎಂದು ಹೇಳಿವೆ. ಅದರ ನಡುವೆಯೂ ಹಲವು ರಾಜ್ಯಗಳು ಈ ನೀತಿಗೆ ಆಕ್ಷೇಪ ವ್ಯಕ್ತಪಡಿಸಿವೆ ಎಂದು ನಾಗಮೋಹನ್ ದಾಸ್ ಮಾಹಿತಿ ನೀಡಿದರು.

ಹೊಸ ನೀತಿಯಲ್ಲಿ ನಾವು ಗುಣಾತ್ಮಕ ಶಿಕ್ಷಣ ನೀಡಲಾಗುತ್ತದೆ ಎಂದು ಕೇಂದ್ರ ಸರಕಾರ ಘೋಷಿಸಿದೆ. ಅದಕ್ಕಾಗಿ ಅನೇಕ ತಿದ್ಧುಪಡಿಗಳನ್ನು ಮಾಡಿದೆ. ಆದರೆ, ರಾಷ್ಟ್ರದ ಜಿಡಿಪಿಯಲ್ಲಿ ಶಿಕ್ಷಣಕ್ಕೆ ಅಗತ್ಯವಾದಷ್ಟು ಹಣ ಮೀಸಲಿಟ್ಟಿಲ್ಲ. ಅದರ ನಡುವೆ ಹೇಗೆ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಕೆಲಸಕ್ಕೆ ಸಮಾನವಾದ ವೇತನ, ಶಿಕ್ಷಣಕ್ಕನುಗುಣವಾದ ನೌಕರಿ ನೀಡದೇ ಗುಣಾತ್ಮಕ ಶಿಕ್ಷಣ ನೀಡಲು ಹೇಗೆ ಸಾಧ್ಯ. ಇದು ಖಾಸಗಿಕ್ಷೇತ್ರ, ಕಾರ್ಪೋರೇಟ್‍ಗಳ ಹಿತವನ್ನು ಕಾಪಾಡುವ, ಆಳುವ ವರ್ಗದ ಹಿತ ಕಾಪಾಡುವ ಒಂದು ನೀತಿಯಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಅಪಾದಿಸಿದರು.

ಕಾರ್ಯಕ್ರಮದಲ್ಲಿ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ, ಬಿಸಿಯೂಟ ನೌಕರರ ಸಂಘದ ಕಾರ್ಯದರ್ಶಿ ಮಾಲಿನಿ ಮೆಸ್ತಾ, ಎಸ್‍ಎಫ್‍ಐನ ವಾಸುದೇವರೆಡ್ಡಿ, ಶಿಕ್ಷಣ ತಜ್ಞ ಕೋಡಿರಂಗಪ್ಪ, ಸಿಐಟಿಯು ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಸೇರಿದಂತೆ ಹಲವರಿದ್ದರು.

ಶಿಕ್ಷಣ ಕ್ಷೇತ್ರ ಕೇಂದ್ರೀಕರಣವಾದರೆ ಅಕ್ಷರ ದಾಸೋಹ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಶಿಕ್ಷಕರ ಪರಿಸ್ಥಿತಿ ಏನಾಗಬೇಕು. ದೇಶದ ಜನಸಾಮಾನ್ಯರ ಒಳಿತಿಗೆ ವಿರುದ್ಧವಾದ ಈ ಕಾಯ್ದೆಯ ವಿರುದ್ಧ ಹೋರಾಟ ಅಗತ್ಯವಿದೆ.

-ಎಚ್.ಎನ್.ನಾಗಮೋಹನ್‍ ದಾಸ್, ನಿವೃತ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News