ಚಿತ್ರಮಂದಿರಗಳಲ್ಲಿ ಶುಚಿತ್ವ ಕಾಪಾಡಲು ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2020-11-05 16:02 GMT

ಮಂಗಳೂರು, ನ.5: ಚಿತ್ರಮಂದಿರಗಳಲ್ಲಿ ಚಲನಚಿತ್ರ ವಿಕ್ಷಿಸಲು ಬರುವ ಸಾರ್ವಜನಿಕರು ಮಾಸ್ಕ್ ಧರಿಸುವುದರೊಂದಿಗೆ ಸುರಕ್ಷಿತ ಅಂತರ ವನ್ನು ಕಡ್ಡಾಯವಾಗಿ ಪಾಲಿಸಲು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚಿಸಿದ್ದಾರೆ.

ದ.ಕ.ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಗುರುವಾರ ಕೋವಿಡ್ ಸೋಂಕು ತಡೆಗಟ್ಟುವುದು ಹಾಗೂ ಕರ್ನಾಟಕ ಸಿನಿಮಾ ರೆಗ್ಯುಲೇಶನ್ ನಿಯಮಗಳ ಪಾಲನೆಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರಕಾರ ಚಲನಚಿತ್ರ ಪ್ರದರ್ಶನಕ್ಕೆ ಮೊದಲ ಕಾರ್ಯನಿರ್ವಹಣಾ ಪ್ರಕ್ರಿಯೆಯನ್ನು ನೀಡಿದೆ. ಅವುಗಳನ್ನು ಚಲನಚಿತ್ರ ಮಂದಿರದ ಮಾಲಕರು ಕಡ್ಡಾಯವಾಗಿ ಪಾಲಿಸಬೇಕು. ಚಿತ್ರಮಂದಿರಗಳು ಮಲ್ಟಿಫ್ಲೆಕ್ಸ್ ನಲ್ಲಿರುವ ಆಸನದ ಒಟ್ಟು ಸಾಮರ್ಥ್ಯದ ಶೇ.50ರಷ್ಟು ಸಂಖ್ಯೆಯ ಪ್ರೇಕ್ಷಕರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಸೂಚಿಸಿದರು.

ಪ್ರವೇಶ ದ್ವಾರದಲ್ಲಿ ಪ್ರೇಕ್ಷಕರು, ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಸ್ಕ್ಯಾನಿಂಗ್ ಮಾಡಬೇಕು, ಪ್ರೇಕ್ಷಕರು ಮಾಸ್ಕ್ ಧರಿಸುವುದರ ಜೊತೆಗೆ ಸುರಕ್ಷಿತ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಚಿತ್ರಮಂದಿರಗಳದ್ದಾಗಿದೆ. ಜನದಟ್ಟಣೆಯನ್ನು ನಿರ್ಬಂಧಿ ಸುವ ದೃಷ್ಟಿಯಿಂದ ನಿರ್ಗಮದ ದ್ವಾರದಲ್ಲಿ ಸಾಲುವಾರು ನಿರ್ಗಮನವನ್ನು ಅನುಸರಿಸಬೇಕು. ಚಿತ್ರಮಂದಿರದ ಆವರಣ ಹಾಗೂ ಜನ ಸಾಮಾನ್ಯರ ಸಂಪರ್ಕಕ್ಕೆ ಬರುವಂತಹ ಎಲ್ಲಾ ಸ್ಥಳಗಳನ್ನು ಸ್ಯಾನಿಟೈಸ್ ಮಾಡುವುದರೊಂದಿಗೆ ಶುಚಿತ್ವವನ್ನು ಕಾಪಾಡಬೇಕು ಎಂದು ಡಿಸಿ ಹೇಳಿದರು.

ಟಿಕೆಟ್ ಬುಕ್ಕಿಂಗ್ ಸಹಿತ ಆಹಾರ ಪದಾರ್ಥಗಳನ್ನು ಖರೀದಿಸುವಾಗ ಡಿಜಿಟಲ್ ಪೇಮೆಂಟ್ಗೆ ಆದ್ಯತೆ ನೀಡಬೇಕು. ಚಲನಚಿತ್ರ ಮಂದಿರಗಳಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ಯಾವುದೆ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಕೋವಿಡ್ ಮಾರ್ಗಸೂಚಿಗಳು ಉಲ್ಲಂಘನೆಯಾದಲ್ಲಿ ಚಿತ್ರಮಂದಿರದ ಮಾಲಕರನ್ನು ಹೊಣೆಗಾರರನ್ನಾಗಿಸಲಾಗುವುದು ಎಂದರು.

ಸಭೆಯಲ್ಲಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಜಿಲ್ಲಾ ಎಸ್ಪಿ ಲಕ್ಷ್ಮಿಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಮಾನಂದ ಬಾಯರಿ ಮತ್ತಿತರ ಅಧಿಕಾರಿಗಳು ಹಾಗೂ ಚಿತ್ರಮಂದಿರದ ಮಾಲಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News