ಟಾಟಾ ಟೆಕ್ನಾಲಜೀಸ್, ಇತರ ಉದ್ಯಮಗಳ ಸಹಭಾಗಿತ್ವ : ರಾಜ್ಯದ 150 ಐಟಿಐ ಉನ್ನತೀಕರಣಕ್ಕೆ ಒಪ್ಪಂದ

Update: 2020-11-06 10:52 GMT

ಬೆಂಗಳೂರು : ರಾಜ್ಯದ ಕೈಗಾರಿಕಾ ತರಬೇತಿ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸುವ ಹಾಗೂ ಆ ಮೂಲಕ ರಾಜ್ಯದ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ನವೆಂಬರ್ 6, 2020ರಂದು ಪುಣೆಯ ಟಾಟಾ ಟೆಕ್ನಾಲಜೀಸ್ ಲಿ. ಕಂಪೆನಿಯೊಂದಿಗೆ ಮಹತ್ವಪೂರ್ಣ ಒಪ್ಪಂದ ಮಾಡಿಕೊಂಡಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಟಾಟಾ ಟೆಕ್ನಾಲಜೀಸ್ ಅಧ್ಯಕ್ಷ ಆನಂದ್ ಭಡೆ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಒಪ್ಪಂದ ಸಹಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಹಾಗೂ ಉದ್ಯಮಗಳು ಕೈಜೋಡಿಸಿ, ಇಂತಹ ವಿನೂತನ ಪ್ರಯತ್ನ ಮಾಡುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇದರಿಂದ ರಾಜ್ಯದ ಯುವಜನತೆಗೆ ಉತ್ಕೃಷ್ಟ ಹಾಗೂ ಇಂದಿನ ಬೇಡಿಕೆಗೆ ತಕ್ಕಂತೆ ಕೌಶಲ್ಯ ಅಭಿವೃದ್ಧಿ ತರಬೇತಿ ದೊರೆಯುವುದಲ್ಲದೆ, ಕೈಗಾರಿಕೆಗಳಿಗೆ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ದೊರೆಯಲಿದೆ. ಆ ಮೂಲಕ ರಾಜ್ಯಕ್ಕೆ ಹಾಗೂ ಕೈಗಾರಿಕೆಗಳಿಗೆ ಪರಸ್ಪರ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಈ ಉಪಕ್ರಮದಿಂದ ರಾಜ್ಯದಲ್ಲಿ ಹೂಡಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂದು ಪ್ರತಿಪಾದಿಸಿದರು.

ಖಾಸಗಿ ಕಂಪೆನಿಗಳು ನಾಲ್ಕು ಸಾವಿರ ಕೋಟಿಗೂ ಹೆಚ್ಚು ನೆರವನ್ನು ಸಿಎಸ್ ಆರ್ ಅಡಿ ನೀಡುತ್ತಿರುವುದು ಇದೇ ಮೊದಲು ಎಂದು ಮುಖ್ಯಮಂತ್ರಿಗಳು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಮಾತನಾಡಿ, ಈ ಕಾರ್ಯಕ್ರಮದಿಂದ ಪ್ರತಿ ವರ್ಷ ಕನಿಷ್ಠ 1 ಲಕ್ಷಕ್ಕೂ ಹೆಚ್ಚು ಯುವಕರಿಗೆ ಉತ್ತಮ ಉದ್ಯೋಗಾವಕಾಶ ದೊರೆಯುವ ನಿರೀಕ್ಷೆ ಇದೆ. ಅಲ್ಲದೆ, ಕೈಗಾರಿಕೆಗಳ ಬೇಡಿಕೆಗಳನ್ನು ಆಧರಿಸಿ, 10 ಹೊಸ ಕೋರ್ಸುಗಳನ್ನು ಪ್ರಾರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಐಟಿಐಗಳಲ್ಲಿ ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲ್ಯಗಳ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಟಾಟಾ ಟೆಕ್ನಾಲಜೀಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿ.ಇ.ಒ ವಾರನ್ ಹ್ಯಾರಿಸ್, ವಿದ್ಯಾರ್ಥಿ ಗಳು ಕೈಗಾರಿಕಾ ವಲಯದಲ್ಲಿ ಆಗುತ್ತಿರುವ ಕ್ಷಿಪ್ರ ಬದಲಾವಣೆಗಳಿಗೆ ಅನುಗುಣವಾಗಿ ಅತ್ಯಾಧುನಿಕ ತರಬೇತಿ ಪಡೆಯಲು ಈ ಉಪಕ್ರಮ ನೆರವಾಗಲಿದೆ.   ಅತ್ಯಾಧುನಿಕ ಯಂತ್ರೋಪಕರಣ, ತಂತ್ರಾಂಶ, ಹಾರ್ಡ್‍ವೇರ್, ಸಾಫ್ಟ್‍ವೇರ್, ಕೋರ್ಸ್ ವೇರ್ ಮತ್ತು ತರಬೇತಿಗಳಿಗೆ ಆದ್ಯತೆ ನೀಡಲಾಗುವುದು. ಆ ಮೂಲಕ   ಉತ್ತಮ ಜಗತ್ತಿನ ಸೃಷ್ಟಿಸುವ ಟಾಟಾ ಸಂಸ್ಥೆಯ ದೃಷ್ಟಿಯನ್ನು ಸಾಕಾರಗೊಳಿಸಲಿದೆ ಎಂದರು. ಕೈಗಾರಿಕಾ ಬೆಳವಣಿಗೆಯನ್ನು ವೃದ್ಧಿಸುವ ಜೊತೆಗೆ  ಸ್ವಯಂ ಉದ್ಯೋಗ ಕೈಗೊಳ್ಳಲು ಹೊಸ ಅವಕಾಶಗಳನ್ನು ತೆರೆಯಲಿದೆ ಎಂದರು.

ಈ ಒಪ್ಪಂದದ ಅನ್ವಯ ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದಲ್ಲಿ  ಕೈಗಾರಿಕೆಗಳ ಬೇಡಿಕೆಗೆ ತಕ್ಕ ತರಬೇತಿ ನೀಡಲು ಅಗತ್ಯ ಸೌಲಭ್ಯ ಒದಗಿಸುವ ಮೂಲಕ ರಾಜ್ಯದ 150 ಸರ್ಕಾರಿ ಐಟಿಐ ಗಳನ್ನು ಒಟ್ಟು 4636.50  ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುವುದು ಹಾಗೂ ಈ ಐಟಿಐಗಳಲ್ಲಿ ಕೈಗಾರಿಕೆಗಳಿಗೆ ವಾಸ್ತವವಾಗಿ ಅಗತ್ಯವಿರುವ ಕೌಶಲ್ಯ ತರಬೇತಿ ನೀಡಲಾಗುವುದು.

ಇದರಲ್ಲಿ ಟಾಟಾ ಟೆಕ್ನಾಲಜೀಸ್ ಜೊತೆಗೆ ಸುಮಾರು 20 ಕಂಪೆನಿಗಳು ತಮ್ಮ ಸಿ. ಎಸ್. ಆರ್. ನಿಧಿಯಿಂದ 4080 ಕೋಟಿ ರೂ. ಗಳನ್ನು ಭರಿಸಲಿವೆ. ಉಳಿದ 657 ಕೋಟಿ ರೂ. ಗಳನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಲಾಗುವುದು. ಈ 150 ಐಟಿಐಗಳನ್ನು ತಲಾ 30 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುತ್ತಿದೆ.

ಈ ಯೋಜನೆಯಡಿ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಮೂಲಕ ಕೈಗಾರಿಕಾ ವಲಯದಲ್ಲಿ ಆಗುತ್ತಿರುವ ಬದಲಾವಣೆಗಳು, ಅಗತ್ಯವಿರುವ ಕೌಶಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಐಟಿಐ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಸೃಷ್ಟಿಸುವ ಗುರಿ ಹೊಂದಲಾಗಿದೆ. ವಿವಿಧ ವಲಯಗಳಲ್ಲಿ ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲದೊಂದಿಗೆ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ದೂರದೃಷ್ಟಿಯನ್ನೂ ಈ ಯೋಜನೆ ಹೊಂದಿದೆ.

ರಾಜ್ಯದಲ್ಲಿ 270 ಸರ್ಕಾರಿ, 196 ಅನುದಾನಿತ ಹಾಗೂ 1247 ಖಾಸಗಿ ಐಟಿಐ ಸೇರಿ ಒಟ್ಟು 1713 ಐಟಿಐಗಳಲ್ಲಿ ಪ್ರತಿ ವರ್ಷ 1.8 ಲಕ್ಷ ಅಭ್ಯರ್ಥಿಗಳು ತರಬೇತಿ ಪಡೆಯುತ್ತಾರೆ. ರಾಜ್ಯದ 150 ಐಟಿಐಗಳನ್ನು ಉನ್ನತೀಕರಿಸುವ ಮೂಲಕ ಈ ಸಂಸ್ಥೆಗಳನ್ನು ಪ್ರಮುಖ ತರಬೇತಿ ಕೇಂದ್ರಗಳನ್ನಾಗಿ ರೂಪಿಸಲಾಗುವುದು. ಇಲ್ಲಿ ನೀಡಲಾಗುವ ವಿಶೇಷ ತರಬೇತಿಗಳ ಅನುಕೂಲವನ್ನು ಇತರ ಐಟಿಐ, ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳೂ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.

ಸರ್ಕಾರ ಹಾಗೂ ಕೈಗಾರಿಕೆಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಇದಾಗಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಉಪಕ್ರಮ ಕೈಗೊಳ್ಳಲಾಗಿದೆ.

ಸಮಾರಂಭದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ಟಾಟಾ ಟೆಕ್ನಾಲಜೀಸ್  ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಓ ವಾರನ್ ಹ್ಯಾರಿಸ್,  ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ಡಾ. ಕೆ.ವಿ. ತ್ರಿಲೋಕ್ ಚಂದ್ರ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News