ಮಂಗಳೂರು : ‘ಹುಂಡೈ ಐ20’ ಕಾರು ಮಾರುಕಟ್ಟೆಗೆ ಬಿಡುಗಡೆ

Update: 2020-11-06 16:05 GMT

ಮಂಗಳೂರು, ನ. 6: ವಿನೂತನ ಹಾಗೂ ಅತ್ಯಂತ ಹೆಚ್ಚು ಆಕರ್ಷಕ ಮಾದರಿಯ ಹುಂಡೈ ಐ 20 ಕಾರು ನಗರದ ಪಡೀಲ್‌ನ ಕಾಂಚನ ಹುಂಡೈ ಶೋರೂಂನಲ್ಲಿ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ಐಸಿಎಐ ಮಂಗಳೂರು ಚೇರ್‌ಮೆನ್ ಸಿಎ ಎಸ್.ಎಸ್. ನಾಯಕ್ ನೂತನ ಹುಂಡೈ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಕಾರುಗಳ ವಲಯದಲ್ಲಿ ಐ20 ಎನ್ನುವುದು ಐಕಾನ್ ಇದ್ದಂತೆ. ಅದೇ ಕಾರು ಇದೀಗ ಹೊಸತನಗಳೊಂದಿಗೆ ಮಾರುಕಟ್ಟೆಗೆ ಮತ್ತೆ ಪರಿಚಿತವಾಗುತ್ತಿರುವುದು ಸಂತೋಷದಾಯಕ. ಹುಂಡೈ ಬ್ರಾಂಡ್ ಹಾಗೂ ಪ್ರಸಾದ್‌ ರಾಜ್ ಕಾಂಚನ್ ಅವರ ನೇತೃತ್ವದ ಕಾಂಚನ ಸಂಸ್ಥೆ ಕರಾವಳಿಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದರು.

ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಐಸಾಕ್ ‌ವಾಜ್ ಮಾತನಾಡಿ, ಹುಂಡೈ ಐ 20 ಕಾರು ನಾವೀನ್ಯತೆಯೊಂದಿಗೆ ಮಾರುಕಟ್ಟೆಗೆ ಪರಿಚಿತಗೊಂಡಿರುವುದು ಶ್ಲಾಘನೀಯ. ಆಕರ್ಷಕ ವಿನ್ಯಾಸದೊಂದಿಗೆ ಬಂದಿರುವ ನೂತನ ಐ20ಯು ಕಾರು ಪ್ರಿಯರ ಮನಗೆಲ್ಲುವಲ್ಲಿ ಯಶಸ್ಸು ಕಾಣಲಿದೆ ಎಂದರು.

ಕಾಂಚನ ಹುಂಡೈ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಮಂಗಳೂರು ಮಾರುಕಟ್ಟೆಯಲ್ಲಿ ಹುಂಡೈ ಐ20 ಕಾರು ಈಗಾಗಲೇ ಮಾರಾಟದಲ್ಲಿ ದಾಖಲೆಯನ್ನು ಕಂಡಿದೆ. ಗ್ರಾಹಕರ ಪ್ರೀತಿಗೆ ಪಾತ್ರವಾದ ಈ ಕಾರು 5000 ಕ್ಕೂ ಅಧಿಕ ಮಾರಾಟವಾಗಿದೆ. ಇದೀಗ ಕಾರು ಹೊಸತನದೊಂದಿಗೆ ಮಾರುಕಟ್ಟೆಗೆ ಪರಿಚಿತವಾಗಿದ್ದು, ಗ್ರಾಹಕರು ದಾಖಲೆಯ ಸಂಖ್ಯೆಯಲ್ಲಿ ಬುಕ್ಕಿಂಗ್ ಕೂಡ ಆರಂಭಿಸಿದ್ದಾರೆ ಎಂದರು.

ಕಾಂಚನ ಸಂಸ್ಥೆಯು ಕಳೆದ 15 ವರ್ಷಗಳಿಂದ ಗ್ರಾಹಕರ ಪ್ರೀತಿ ಗಳಿಸಿಕೊಂಡು ಬಂದಿದ್ದು, ಸಂಸ್ಥೆಯ ಕಾರು ಮಾರಾಟ ಪ್ರಮಾಣವೂ ಏರಿಕೆ ಯನ್ನು ದಾಖಲಿಸಿದೆ. ಕಳೆದ ತಿಂಗಳು ಸಂಸ್ಥೆಯು ದಾಖಲೆಯ 300 ಕಾರು ಮಾರಾಟ ಮಾಡಿದೆ. 1000 ಉದ್ಯೋಗಿಗಳೊಂದಿಗೆ ಸಂಸ್ಥೆಯು ಗ್ರಾಹಕರಿಗೆ ಅತ್ಯುತ್ತಮ ಸೇವೆ ಕಲ್ಪಿಸಿದೆ ಎಂದರು.

ನೂತನ ಕಾರು ಖರೀದಿ ಮಾಡಿದ ಮೊದಲ ಮೂವರು ಗ್ರಾಹಕರಿಗೆ ಕೀಲಿಕೈ ಹಸ್ತಾಂತರಿಸಲಾಯಿತು. ಉದ್ಯಮಿ ಯೋಗೀಶ್ ಪೈ, ಕಾಂಚನ ಹ್ಯುಂಡೈ ಸಂಸ್ಥೆಯ ಸೇಲ್ಸ್ ಮ್ಯಾನೇಜರ್ ಗಣಪತಿ, ಜನರಲ್ ಮ್ಯಾನೇಜರ್ ಪ್ರತೀಕ್ ಕಾಮತ್, ಪ್ರಮುಖರಾದ ಸುದರ್ಶನ್, ರಾಜೇಶ್ ಅಂಚನ್, ಫಾರ್‌ವಿಂಡ್ಸ್ ಮಾಸ್ ಕಮ್ಯುನಿಕೇಶನ್ ಸಂಸ್ಥೆಯ ನಿರ್ದೇಶಕ ಇ. ಫೆರ್ನಾಂಡೀಸ್ ಉಪಸ್ಥಿತರಿದ್ದರು. ವಿಲ್ಫ್ರೆಡ್ ಆಲ್ವರೀಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News