ನ.12ರಂದು ಕಣಚೂರು ಅರ್ಬನ್ ಹೆಲ್ತ್ ಸೆಂಟರ್ ಉದ್ಘಾಟನೆ
ಮಂಗಳೂರು, ನ.11: ಕಂಕನಾಡಿ ಬೈಪಾಸ್ ರಸ್ತೆಯಲ್ಲಿ ನಿರ್ಮಾಣವಾಗಿರುವ ಕಣಚೂರು ನಗರ ಆರೋಗ್ಯ ಕೇಂದ್ರ(ಕಣಚೂರು ಅರ್ಬನ್ ಹೆಲ್ತ್ ಸೆಂಟರ್)ದ ಉದ್ಘಾಟನೆ ನ. 12ರಂದು ನಡೆಯಲಿದೆ ಎಂದು ಕಣಚೂರು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ನ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ದೇವಿದಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಳಗ್ಗೆ 10:30ಕ್ಕೆ ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟನೆ ನೆರವೇರಿಸುವರು ಎಂದರು.
ಮಂಗಳೂರಿನ ನಾಟೆಕಲ್ನಲ್ಲಿ ಕಾರ್ಯಚರಿಸುತ್ತಿರುವ ಕಣಚೂರು ಆಸ್ಪತ್ರೆಯು ತನ್ನ ಸೇವೆಯನ್ನು ನಗರವಾಸಿಗಳಿಗೆ ವಿಸ್ತರಿಸುವ ಸಲುವಾಗಿ ನುರಿತ ವೈದ್ಯರ ತಂಡದೊಂದಿಗೆ ಉತ್ತಮ ಸೌಲಭ್ಯಗಳಿಂದ ಕೂಡಿದ ಆರೋಗ್ಯ ಕೇಂದ್ರವನ್ನು ಲೋಕಾರ್ಪಣೆ ಮಾಡಲಿದೆ ಎಂದವರು ಹೇಳಿದರು.
ವಿಶೇಷ ಆರ್ಟಿಪಿಸಿಆರ್ ಲ್ಯಾಬ್ ಸೌಲಭ್ಯವು ಎನ್ಎಬಿಎಲ್ ಮತ್ತು ಐಸಿಎಂಆರ್ ಪ್ರಮಾಣೀಕೃತವಾಗಿದ್ದು, ಇದು ದಿನದ 24 ಗಂಟೆಯೂ ವರದಿಯನ್ನು ನೀಡಲಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಇದು ನೀಡಲಿದೆ ಎಂದು ಅವರು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ನರರೋಗ ತಜ್ಞ ಡಾ.ಕೆ.ವಿ.ದೇವಾಡಿಗ, ಕೆಎಂಸಿಯ ಹಿರಿಯ ವೈದ್ಯ ಡಾ.ಚಕ್ರಪಾಣಿ, ಡಾ.ಮುಹಮ್ಮದ್ ಇಸ್ಮಾಯೀಲ್ ಎಚ್. ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಣಚೂರು ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್ ಉಪಸ್ಥಿತರಿದ್ದರು.