ಸ್ಮಾರ್ಟ್‌ ಸಿಟಿ ಕಾಮಗಾರಿ-ಸಂಚಾರ ಸಮಸ್ಯೆ ಶೀಘ್ರ ಪರಿಹಾರ : ಶಾಸಕ ಕಾಮತ್

Update: 2020-11-11 16:09 GMT

ಮಂಗಳೂರು, ನ.11: ಮಂಗಳೂರಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡದೆ ರಸ್ತೆ ಸಂಚಾರ ಬದಲಿಸಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆದುಕೊಂಡಿದ್ದೇನೆ. ಸಂಚಾರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ನಡೆಯುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆ ಬದಲಿಸಿದ ಕಾರಣ ಉಂಟಾದ ಟ್ರಾಫಿಕ್ ಸಮಸ್ಯೆಯ ಕುರಿತು ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಜೊತೆ ಸಭೆ ನಡೆಸಿದ ಒಂದೇ ದಿನದಲ್ಲಿ ಸಮಸ್ಯೆ ಪರಿಹರಿಸುವ ಕಾರ್ಯದಲ್ಲಿ ಅಲ್ಪಮಟ್ಟಿಗೆ ಯಶಸ್ಸು ದೊರೆತಿದೆ ಎಂದರು.

ಅಧಿಕಾರಿಗಳು ಪ್ರಮುಖ ರಸ್ತೆಯಲ್ಲಿ ಕಾಮಗಾರಿ ಪ್ರಾರಂಭಿಸುವ ಮುನ್ನ ಸಾರ್ವಜನಿಕರಿಗೆ ಮಾಹಿತಿ ನೀಡದಿರುವ ಕಾರಣ ಸಹಜವಾಗಿ ಗೊಂದಲ ಉಂಟಾಗಿತ್ತು. ಹಾಗಾಗಿ ಸೋಮವಾರವೇ ತುರ್ತು ಸಭೆ ನಡೆಸಿ ಸಾರ್ವಜನಿಕರು ಹಾಗೂ ಅಧಿಕಾರಿಗಳ ಅಭಿಪ್ರಾಯ ಪಡೆದು ಕೊಂಡು ಬದಲಿಯ ವ್ಯವಸ್ಥೆಯ ಆದೇಶ ನೀಡಿದ್ದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಲೋಬೋ-ಮಿಥುನ್ ರೈಗೆ ತಿರುಗೇಟು: ವೇದವ್ಯಾಸ್ ಕಾಮತ್ ಅವರಿಗೆ ಅನುಭವದ ಕೊರತೆಯಿದೆ ಎಂದಿದ್ದ ಮಾಜಿ ಶಾಸಕ ಜೆ.ಆರ್. ಲೋಬೊ ಹಾಗೂ ಮಿಥುನ್ ರೈ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕ ಕಾಮತ್, ಸರಕಾರಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಅನುಭವವಿದ್ದ ಜೆ.ಆರ್. ಲೋಬೊ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಎಡಿಬಿ-1 ಮುಖ್ಯಸ್ಥರಾಗಿದ್ದ ಯೋಜನೆ ಯಾಕೆ ವಿಫಲವಾಗಿತ್ತು ಎಂದು ಪ್ರಶ್ನಿಸಿದರು.

ಮಂಗಳೂರಿನ ಶಕ್ತಿನಗರದಲ್ಲಿ ವಸತಿ ಯೋಜನೆಯ 930 ವಸತಿ ನಿರ್ಮಾಣಕ್ಕೆ ಆಯ್ಕೆ ಮಾಡಿದ ಜಮೀನು ಅರಣ್ಯ ಪ್ರದೇಶವಾಗಿದ್ದರೂ ಅವೆಲ್ಲವನ್ನು ಗಣನೆಗೆ ತೆದುಕೊಳ್ಳದೆ ತುರ್ತಾಗಿ ಹಕ್ಕುಪತ್ರ ವಿತರಿಸಲಾಗಿತ್ತು. ಬಳಿಕ ಗುದ್ದಲಿಪೂಜೆ ನೆರವೇರಿಸಿದಾಗ ಜೆ.ಆರ್. ಲೋಬೊ ಅವರಿಗೆ ಅನುಭವದ ಕೊರತೆಯಿತ್ತೇ ಎಂದು ಅವರು ತಿರುಗೇಟು ನೀಡಿದ್ದಾರೆ.

ಕಂಕನಾಡಿ ಹಾಗೂ ಕದ್ರಿ ಮಾರುಕಟ್ಟೆ ನಿರ್ಮಾಣ ಯೋಜನೆಗೆ ಬ್ಯಾಂಕ್ ಸಾಲದ ಕುರಿತು ಯಾವುದೇ ರೀತಿಯ ಪ್ರಕ್ರಿಯೆ ಪೂರ್ಣಗೊಳಿಸದೆ ಗುದ್ದಲಿಪೂಜೆ ನೆರವೇರಿಸಿದಾಗ ಅವರಿಗೆ ಅನುಭವದ ಕೊರತೆ ಇತ್ತೇ ಎಂದರು.

ದೇಶದೆಲ್ಲೆಡೆ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತಿದೆ. ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಭಾರತೀಯ ಜನತಾ ಪಾರ್ಟಿ ಜಯ ಗಳಿಸಿದೆ. ಇದು ಜನರಿಗೆ ನಮ್ಮ ಪಕ್ಷದ ಮೇಲಿನ ನಂಬಿಕೆಯಾಗಿದೆ. ಇವೆಲ್ಲ ಕಾರಣಗಳಿಂದ ಹತಾಶರಾಗಿರುವ ಕಾಂಗ್ರೆಸ್ ಮುಖಂಡರು ಮಿಥ್ಯಾರೋಪಗಳನ್ನು ಮಾಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News