ಬಸ್ ಚಾಲಕರಿಗೆ ಗೌರವ ಬ್ಯಾಡ್ಜ್ ವಿತರಣೆ

Update: 2020-11-15 14:45 GMT

ಮಂಗಳೂರು, ನ.15: ಅತ್ಯುತ್ತಮ, ಪ್ರಾಮಾಣಿಕ ಬಸ್ ಚಾಲಕರ ಸೇವೆಯನ್ನು ಗುರುತಿಸಿ ಗೌರವ ಸಲ್ಲಿಸುವುದು ಮಾದರಿ ಕೆಲಸವಾಗಿದೆ. ಇದು ಇನ್ನಷ್ಟು ಯುವ ಚಾಲಕರಿಗೆ ಉತ್ತಮ ಸೇವೆ ನೀಡಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಫಾದರ್ ಪ್ರವೀಣ್ ಮಾರ್ಟಿಸ್ ಹೇಳಿದರು.

ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕ, ಸಂತ ಅಲೋಶಿಯಸ್ ಕಾಲೇಜು ಮತ್ತು ದ.ಕ. ಬಸ್ ಮಾಲಕರ ಸಂಘ ಹಾಗೂ ಕೆನರಾ ಬಸ್ ಮಾಲೀಕರ ಸಂಘದ ಸಹಯೋಗದಲ್ಲಿ ನಗರದ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ರವಿವಾರ ಖಾಸಗಿ ಬಸ್‌ನ ಅತ್ಯುತ್ತಮ ಹಿರಿಯ ಚಾಲಕರಿಗೆ ಗೌರವ ಬ್ಯಾಡ್ಜ್ ವಿತರಣೆ, ಅಪಘಾತ ಮತ್ತು ಕೊರೊನಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರಿನಲ್ಲಿ ಖಾಸಗಿ ಬಸ್ ಚಾಲಕರು ಬಹಳಷ್ಟು ಒತ್ತಡದ ನಡುವೆಯೂ ಉತ್ತಮ ಸೇವೆ ನೀಡುತ್ತಿದ್ದಾರೆ. ಅವರ ಸೇವೆಯಿಂದ ಮಾಲಕ ರಿಗೂ ಉತ್ತಮ ಹೆಸರು ಬಂದಿದೆ. ಮುಂದೆಯೂ ಚಾಲಕರು ಉತ್ತಮ ಸೇವೆ ನೀಡುವಂತಾಗಲಿ ಎಂದು ಪ್ರವೀಣ್ ಮಾರ್ಟಿಸ್ ನುಡಿದರು.

ಮಂಗಳೂರು ನಗರ ಪೊಲೀಸ್ ಟ್ರಾಫಿಕ್ ಉಪವಿಭಾಗದ ಎಸಿಪಿ ಎಂ.ಎ.ನಟರಾಜ್ ಮಾತನಾಡಿ, ಬೇರೆಲ್ಲಾ ಕ್ಷೇತ್ರದಲ್ಲಿ ಪ್ರತಿವರ್ಷ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ. ಖಾಸಗಿ ಬಸ್ ಚಾಲಕರ ಜೀವಮಾನದಲ್ಲೇ ಪ್ರಥಮ ಬಾರಿ ಗುರುತಿಸಲಾಗಿದ್ದು, ಅದರಲ್ಲೂ ಅಪಘಾತವನ್ನೇ ಮಾಡದ ಚಾಲಕರಿರುವುದು ಹೆಮ್ಮೆಯ ವಿಚಾರ ಎಂದರು.

ಕೆಟ್ಟ ರಸ್ತೆಗಳು ಮತ್ತು ಇನ್ನೊಬ್ಬರ ತಪ್ಪಿನಿಂದಲೂ ಅಪಘಾತಗಳು ಸಂಭವಿಸುತ್ತವೆ. ದೇಶದಲ್ಲಿ ಪ್ರತಿವರ್ಷ 1.5 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದರೆ, ಮಂಗಳೂರಿನಲ್ಲೇ ಪ್ರತೀ ವರ್ಷ 100 ಮಂದಿ ಮೃತಪಟ್ಟು, ಸುಮಾರು 1,000 ಮಂದಿ ಗಾಯಗೊಳ್ಳುತ್ತಾರೆ. ಇದರಿಂದ ಅಷ್ಟು ಕುಟುಂಬಗಳು ನಲುಗಿ ಹೋಗುತ್ತವೆ. ಈ ಹಿನ್ನೆಲೆಯಲ್ಲಿ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಸುಪ್ರೀಂ ಕೋರ್ಟ್ ಮಾರ್ಗಸೂಚಿ ನೀಡಿದ್ದು, ಈಗ ಅಪಘಾತ ನಡೆದ ಸ್ಥಳಕ್ಕೆ ಹಿರಿಯ ಅಕಾರಿಗಳು ಭೇಟಿ ನೀಡಿ, ರಸ್ತೆ ದುರಸ್ತಿ, ಸಂಚಾರ ಬದಲಾವಣೆಗೆ ನಿರ್ದೇಶನ ನೀಡುತ್ತಾರೆ. ಕಳೆದ ತಿಂಗಳು ತೊಕ್ಕೊಟ್ಟಿನಲ್ಲಿ ನವ ದಂಪತಿ ಮೃತಪಟ್ಟಿದ್ದ ಮರುದಿನ ಪೊಲೀಸ್ ಕಮಿಷನರ್ ಸ್ಥಳಕ್ಕೆ ತೆರಳಿ, ಸಂಚಾರ ಮಾರ್ಪಾಟು ಮಾಡಿದ್ದಾರೆ ಎಂದರು.

ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ಕೆ.ರಾಜವರ್ಮ ಬಲ್ಲಾಳ್ ಮಾತನಾಡಿದರು.

ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ಸ್ವಾಗತಿಸಿದರು. ಪತ್ರಕರ್ತ ವಿಜಯ ಕೋಟ್ಯಾನ್ ಪಡು ಬ್ಯಾಡ್ಜ್ ಪಡೆಯುವ ಬಸ್ ಚಾಲಕರ ಪಟ್ಟಿ ವಾಚಿಸಿದರು. ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಪ್ರಚಾರ ಮತ್ತು ಸಾರ್ವಜನಿಕ ಸಂಪರ್ಕ ಸಮಿತಿ ಅಧ್ಯಕ್ಷ ಬಿ.ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಎಸ್.ಎ. ಪ್ರಭಾಕರ ಶರ್ಮಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News