ಪಿಲಾರುವಿನಲ್ಲಿ ಕಿಸಾನ್ ಗೋಷ್ಠಿ ಕಾರ್ಯಕ್ರಮ
ಶಿರ್ವ, ಡಿ.12: ಪರಂಪರಾಗತ ಕೃಷಿ ಮತ್ತು ಹೈನುಗಾರಿಕೆಯನ್ನು ವೈಜ್ಞಾನಿಕ ವಾಗಿ ಮಾಡಿದರೆ ಕೃಷಿರ ಆದಾಯ ಹೆಚ್ಚುವುದರಲ್ಲಿ ಸಂದೇಹವಿಲ್ಲ. ಇದರಿಂದ ಅಧಿಕ ಪ್ರಯೋಜನ ಪಡೆಯಬಹುದು ಎಂದು ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ, ಆತ್ಮ ಅನುಷ್ಠಾನ ಸಮಿತಿ ಉಡುಪಿ ತಾಲೂಕು, ರೈತ ಸಂಪರ್ಕ ಕೇಂದ್ರ ಕಾಪು ಮತ್ತು ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಪಿಲಾರು ಹಲಸಿನಟ್ಟೆ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ಕಿಸಾನ್ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಧನಂಜಯ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹೇಮಂತ ಕುಮಾರ್, ಕಟಪಾಡಿ ಕೋಟೆ ಪಶುಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಚಂದ್ರ ಶೇಖರ ಸಾಲಿಮಠ, ಉಡುಪಿ ಸಹಾಯಕ ಕೃಷಿ ನಿರ್ದೇಶಕ ಮೋಹನರಾಜ್, ಉಡುಪಿ ಸಾಮಾಜಿಕ ಅರಣ್ಯ ಉಪವಲಯ ಅರಣ್ಯಾಧಿಕಾರಿ ನವೀನ್ ಬಿ.ಎನ್. ಮಾಹಿತಿ ನೀಡಿದರು.
ಸಂಘದ ನಿರ್ದೇಶಕರು, ಮುದರಂಗಡಿ ಹಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಕಾಶ ಶೆಟ್ಟಿ, ಗ್ರಾ.ಪಂ. ಮಾಜಿ ಸದಸ್ಯ ಶಿವರಾಮ ಭಂಡಾರಿ, ಹರಿಣಾಕ್ಷ ಶೆಟ್ಟಿ, ಸಾಂತೂರು, ಪಿಲಾರು ಗ್ರಾಮಗಳ ಕೃಷಿಕರು ಉಪಸ್ಥಿತರಿದ್ದರು.
ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಸಂಜನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಪು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಪಿ.ಶೇಖರ್ ವಂದಿಸಿದರು. ಕೃಷಿ ಅನುವುಗಾರ ರಾಘವೇಂದ್ರ ನಾಯಕ್ ಶಿರ್ವ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.