ಸಾವಯವ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ
ಉಡುಪಿ, ಡಿ.16: ಕೃಷಿ ಆಸಕ್ತರು ಸೇರಿಕೊಂಡು ಸ್ಥಾಪಿಸಿರುವ ಕರಾವಳಿ ಇಂಟಗ್ರೇಟೆಡ್ ಆಗ್ರೋ ಪ್ರೋಡ್ಯೂಸರ್ ಕಂಪೆನಿಯು ಉಡುಪಿಯಲ್ಲಿ ಸಾವಯವ ಕೃಷಿ ಉತ್ಪನ್ನಗಳನ್ನು ವ್ಯವಸ್ಥಿತವಾಗಿ ಮಾರಾಟ ಮಾಡಲು ವಾಣಿಜ್ಯ ಮಳಿಗೆಯನ್ನು ಆರಂಭಿಸಲು ಉದ್ದೇಶಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪೆನಿಯ ನಿರ್ದೇಶಕ ವಿಟ್ಲ ಹರೀಶ್ ಜೋಷಿ, ನಗರದ ಕೋರ್ಟ್ ರೋಡ್ನ ಮಾಂಡವಿ ಮೆರೆಡಿಯನ್ ವಾಣಿಜ್ಯ ಸಂಕೀರ್ಣದಲ್ಲಿರುವ ಕರಾವಳಿ ಆರ್ಗ್ಯಾನಿಕ್ ನೀಡ್ಸ್ ಮಳಿಗೆಯನ್ನು ಡಿ.18ರಂದು ಸಂಜೆ 6ಗಂಟೆಗೆ ಆರ್ಯುವೇದ ತಜ್ಞ ಡಾ. ತನ್ಮಯ ಗೋಸ್ವಾಮಿ ಹಾಗೂ ದೊಡ್ಡಣಗುಡ್ಡೆ ಹೂ ಮಾರಾಟ ಸಂಕೀರ್ಣದ ಮಳಿಗೆ ಯನ್ನು ಡಿ.23ರಂದು ಸಂಜೆ 5ಗಂಟೆಗೆ ಉದ್ಯಮಿ ಸತ್ಯೇಂದ್ರ ಪೈ ಉದ್ಘಾಟಿಸಲಿರುವರು ಎಂದರು.
ಸಾವಯವ ಪದ್ಧತಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಮಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ಮಳಿಗೆಯಲ್ಲಿ ಕೇವಲ ಸಾವಯವ ವಸ್ತುಗಳು ಮಾತ್ರ ಲಭ್ಯ ಇುತ್ತದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಪ್ರಕಾಶ್ ರಾವ್, ವಾಸುದೇವ, ರಂಜಿತ್ ಪಾಡಿಗಾರ್, ವಸಂತ್ ರಾವ್, ಸಂತೋಷ ಶೆಟ್ಟಿ ಉಪಸ್ಥಿತರಿದ್ದರು.