ಸಾಮರ್ಥ್ಯ ಆಧಾರಿತ ಸಾಲ ಯೋಜನೆಯ ಕೈಪಿಡಿ ಬಿಡುಗಡೆ

Update: 2020-12-17 15:59 GMT

ಮಂಗಳೂರು, ಡಿ.17: ನಬಾರ್ಡ್ ಸಾಮಾರ್ಥ್ಯ ಆಧಾರಿತ ಸಾಲ ಯೋಜನೆಯ ಆಧಾರದಲ್ಲಿ ಲೀಡ್ ಬ್ಯಾಂಕ್ ಮೂಲಕ ಜಿಲ್ಲಾ ಸಾಲ ಯೋಜನೆ ರೂಪಿಸಿ ನಿಗದಿತ ಗುರಿ ಸಾಧಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಡಿಸಿಸಿಡಿಎಲ್‌ಆರ್‌ಸಿ ಚೇರ್‌ಮನ್ ಹಾಗೂ ಜಿಪಂ ಸಿಇಒ ಡಾ. ಸೆಲ್ವಮಣಿ ಆರ್. ಸೂಚಿಸಿದ್ದಾರೆ.

ಜಿಪಂನ ಸಿಇಒ ಕಚೇರಿಯಲ್ಲಿ ನಬಾರ್ಡ್ ವತಿಯಿಂದ ಸಾಮಾರ್ಥ್ಯ ಆಧಾರಿತ ಸಾಲ ಯೋಜನೆಯ ಆರ್ಥಿಕ ವರ್ಷ 2021-22ರ ಕೈಪಿಡಿಯನ್ನು ಗುರುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ಬ್ಯಾಂಕಿನ ಮ್ಯಾನೇಜರ್‌ಗಳಿಗೆ ವಿವಿಧ ಕ್ಷೇತ್ರಗಳಲ್ಲಿರುವ ಸಾಮರ್ಥ್ಯಾಧಾರಿತ ಸಾಲ ಯೋಜನೆಯನ್ನು ನಬಾರ್ಡ್ ಸಂಸ್ಥೆಯ ಮೂಲಕ ಗುರುತಿಸಿ ಕೊಡಲಾಗಿದೆ. ಜಿಲ್ಲಾ ಸಾಲ ಯೋಜನೆಯಡಿ ರೂಪಿಸುವ ನಿಗದಿತ ಗುರಿಯನ್ನು ಸಾಧಿಸಿ ಅರ್ಹರಿಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಎಂ.ಪಿ ಮಾತನಾಡಿ, ಕಳೆದ ವರ್ಷದ ಜಿಲ್ಲಾ ಸಾಲ ಯೋಜನೆಯಡಿ ನಿರ್ದಿಷ್ಟ ಗುರಿ ಸಾಧಿಸಲು ಎಲ್ಲ ಬ್ಯಾಂಕ್‌ಗಳು ಶ್ರಮಿಸಿದ್ದು, 2021-2022ರ ಅವಧಿಯಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಗುರಿ ಸಾಧಿಸುವತ್ತ ಶ್ರಮಿಸಬೇಕೆಂದರು. 2021-22ರ ನಬಾರ್ಡ್‌ನ ಸಾಮಾರ್ಥ್ಯ ಆಧಾರಿತ ಸಾಲ ಯೋಜನೆಯ ಮೇಲೆ ವಾರ್ಷಿಕ ಸಾಲ ಯೋಜನೆಯನ್ನು ಸಿದ್ಧಪಡಿಸಲಾಗುವುದೆಂದರು.

ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸಂಗೀತಾ ಎಸ್. ಕರ್ತಾ ಮಾತನಾಡಿ, ಈ ಯೋಜನೆಯಡಿ ಆರ್ಥಿಕ ವರ್ಷ 2021-2020 ರಅನ್ವಯ ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ 7,651.6 ಕೋಟಿ, ಅತೀ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರಕ್ಕೆ 4,004.64 ಕೋಟಿ, ಶೈಕ್ಷಣಿಕ ಕ್ಷೇತ್ರಕ್ಕೆ 256.50 ಕೋಟಿ, ಗೃಹ ಸಾಲ ಕ್ಷೇತ್ರಕ್ಕೆ 1,300 ಕೋಟಿ, ಆದ್ಯತಾ ರಂಗಕ್ಕೆ 13,984.72 ಕೋಟಿ ಕ್ರೀಯಾ ಯೋಜನೆಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ರಿಜಿನಲ್ ಬ್ಯಾಂಕ್ ಮ್ಯಾನೇಜರ್ ಸುಚಿತ್ರಾ, ಬ್ಯಾಂಕ್ ಆಫ್ ಬರೋಡಾದ ರಿಜಿನಲ್ ಮ್ಯಾನೇಜರ್ ಸುನೀಲ್ ಕೆ. ಪೈ, ಕರ್ನಾಟಕ ಬ್ಯಾಂಕ್ ರಿಜಿನಲ್ ಮ್ಯಾನೇಜರ್ ಪ್ರಸಾನಂದ್, ಎಸ್‌ಸಿಡಿಸಿಸಿ ಬ್ಯಾಂಕಿನ ಸಿಇಓ ರವೀಂದ್ರ, ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕಿನ ರಿಜಿನಲ್ ಮ್ಯಾನೇಜರ್ ಸೂರ್ಯ ನಾರಾಯಣ, ಯೂನಿಯನ್ ಬ್ಯಾಂಕಿನ ಚೀಫ್ ಮ್ಯಾನೇಜರ್ ಕೃಷ್ಣಮೂರ್ತಿ, ಲೀಡ್ ಬ್ಯಾಂಕಿನ ಅಧಿಕಾರಿ ಗಿರೀಶ್ ಯು.ಕೆ. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News