ಗ್ರಾಮ ಪಂಚಾಯತ್ ಚುನಾವಣೆ; ಗುಣಾತ್ಮಕ ಫಲಿತಾಂಶ : ಸಚಿವ ಕೋಟ
ಕಾಪು : ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಗಮನಿಸಿಕೊಂಡು ಎಲ್ಲಾ ಕಡೆ ಸ್ಪರ್ಧೆ ಮಾಡಿ ಗುಣಾತ್ಮಕ ಫಲಿತಾಂಶ ಪಡೆಯುವ ನಿರ್ದಾರ ಮಾಡಿದೆ ಎಂದು ಬಂದರು ಮತ್ತು ಮೀನುಗಾರಿಕಾ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಿಜೆಪಿ ಕಾಪು ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯ 154 ಗ್ರಾಮ ಪಂಚಾಯಿತಿಗಳಲ್ಲಿ ಗುಣಮಟ್ಟದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಕೆಲಸ ಕಾರ್ಯಗಳನ್ನು ಬಿಜೆಪಿ ಕೈಗೊಂಡಿದೆ. ಕಾಪು ವಿಧಾನಸಭಾ ಕ್ಷೇತ್ರದ 26 ಗ್ರಾಮ ಪಂಚಾಯಿತಿಗಳಲ್ಲಿ 26ರಲ್ಲೂ ಗೆಲುವಾಗಲಿದೆ ಎಂದರು. ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ತಂಡ ಸೇರಿ ರಾಜ್ಯಾದ್ಯಂತ ಗ್ರಾಮ ಸ್ವರಾಜ್ ಯಾತ್ರೆ ಕೈಗೊಂಡಿದ್ದು, ಆರು ತಂಡಗಳ ನೇತೃತ್ವದಲ್ಲಿ 30 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗಿದೆ. ರಾಜ್ಯದಲ್ಲಿ 6,022 ಗ್ರಾಮ ಪಂಚಾಯಿತಿಗಳಿದ್ದು, 99,500ಕ್ಕೂ ಅಧಿಕ ಸದಸ್ಯರಿದ್ದಾರೆ. ಕಳೆದ ಸಾಲಿನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ ಅತ್ಯಂತ ಕಡಿಮೆ ಇತ್ತು. ಗ್ರಾಮ ಸ್ವರಾಜ್ ಜಾಗೃತಿ ಯಾತ್ರೆ ಮೂಲಕ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಶೇಕಡ 70 ಕ್ಕೂ ಅಧಿಕ ಫಲಿತಾಂಶವನ್ನು ಬಿಜೆಪಿ ಪಡೆಯುವ ವಿಶ್ವಾಸವಿದೆ. ರಾಜ್ಯದಲ್ಲಿ ಈವರೆಗೆ ಆಗದಿರುವ ಫಲಿತಾಂಶ ಬಿಜೆಪಿ ಪಡೆದು ಗ್ರಾಮಮಟ್ಟದ ಅಧಿಕಾರದ ಸೂತ್ರವನ್ನು ಹಿಡಿಯಲಿದೆ. ಮೋದಿ ಪ್ರಧಾನಿಯಾದ ಬಳಿಕ ಗ್ರಾಮಾಡಳಿತಕ್ಕೆ ಹೆಚ್ಚು ಶಕ್ತಿ ಕೊಡುವ ಕೆಲಸವಾಗಿದೆ.
ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ ನಾಯಕ್, ಪಕ್ಷದ ಪ್ರಮುಖರಾದ ಸುರೇಶ್ ಶೆಟ್ಟಿ ಗುರ್ಮೆ, ಯಶಪಾಲ್ ಸುವರ್ಣ, ಶೀಲಾ ಕೆ ಶೆಟ್ಟಿ, ಶಿಲ್ಪಾ ಜಿ ಸುವರ್ಣ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನ್ ಎಸ್.ಕೆ. ಮೊದಲಾದವರು ಉಪಸ್ಥಿತರಿದ್ದರು.