ಉಡುಪಿ ಬಿಷಪ್‌ರಿಂದ ಕ್ರಿಸ್‌ಮಸ್ ಸಂದೇಶ

Update: 2020-12-23 13:16 GMT

ಉಡುಪಿ, ಡಿ.23: ಇಡೀ ವಿಶ್ವವು ಆರೋಗ್ಯ, ನೆಮ್ಮದಿ ಹಾಗೂ ಶಾಂತಿ- ಸಮಾಧಾನಗಳಿಗಾಗಿ ಹಾತೊರೆಯುತ್ತಿರುವ ಈ ಕಾಲದಲ್ಲಿ ಯೇಸು ಕ್ರಿಸ್ತರ ಜನನದ ಮಹೋತ್ಸವ ಕ್ರಿಸ್‌ಮಸ್ ಭರವಸೆಯ ಕಿರಣದಂತೆ ಹೊಮ್ಮಿ, ಬರಲಿರುವ ಹೊಸ ಬದುಕಿಗೆ ಪೀಠಿಕೆ ಹಾಕುವಂತೆ ಮೂಡಿ ಬಂದಿದೆ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ನಾಡಿನ ಜನತೆಗೆ ನೀಡಿದ ಕ್ರಿಸ್‌ಮಸ್ ಸಂದೇಶದಲ್ಲಿ ತಿಳಿಸಿದ್ದಾರೆ.

ಪ್ರತಿ ಬಾರಿಯ ಕ್ರಿಸ್ತಜಯಂತಿ ಆಚರಣೆ ಈ ಭೂಲೋಕದ ಎಲ್ಲ ಮನುಜರಿಗೆ ವಿಶೇಷವಾದ, ನವೀಕೃತವಾದ ಒಂದು ಕೊಡುಗೆಯಾಗಿದೆ ಎನ್ನು ತ್ತಾರೆ ಪೋಪ್ ಫ್ರಾನ್ಸಿಸ್. ಕ್ರಿಸ್ತ ಜಯಂತಿಯತ್ತ ಭರವಸೆಯಿಂದ ನೋಡಲು, ಕಂದ ಯೇಸುವನ್ನು ಕಂಡು, ನಮಿಸಿ ಹೊಸ ಬದುಕಿನತ್ತ ಸಾಗಲು ಅವರು ನಮಗೆ ಕರೆ ನೀಡಿದ್ದಾರೆ.

ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಈ ಕಾಲದಲ್ಲಿ ನಮ್ಮ ನೆರೆ ಹೊರೆಯವರಲ್ಲಿ ಪ್ರೀತಿ, ಸಹಬಾಳ್ವೆ, ಐಕ್ಯತೆ ಎಂಬ ಬೀಜವನ್ನು ಬಿತ್ತಿ ಎಲ್ಲೆಡೆ ಶಾಂತಿ ಮತ್ತು ಸೌಹಾರ್ದತೆಯನ್ನು ಸ್ಥಾಪಿಸುವ ಕಾರ್ಯ ನಮ್ಮಿಂದಾಗಬೇಕಿದೆ. ಇವನಾರವ ಎನ್ನದಿರಯ್ಯ, ಇವ ನಮ್ಮವ ಎನ್ನಿರಯ್ಯ ಎಂಬ ಬಸವಣ್ಣನವರ ವಚನದಂತೆ ಯಾರನ್ನೂ ಪ್ರತ್ಯೇಕಿಸದೆ ಎಲ್ಲರನ್ನೂ ನಮ್ಮವರೆಂದು ಸ್ವೀಕರಿಸುವ ಉದಾರತೆ ನಮ್ಮಲ್ಲಿ ಬೆಳೆಯಬೇಕು. ಶಾಂತಿಯು ನಮ್ಮ ಮನೆ, ಮನಗಳಲ್ಲಿ ಮತ್ತು ಸಮಾಜದಲ್ಲಿ ಮನೆ ಮಾಡಬೇಕು. ಇದೇ ನಾವು ಪರರಿಗೆ ನೀಡುವ ಅತ್ಯುನ್ನತ ಕ್ರಿಸ್ಮಸ್ ಉಡುಗೊರೆ ಎಂದು ಬಿಷಪ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ವಿಷಮ ಕಾಲದಲ್ಲಿ ಕ್ರಿಸ್ಮಸ್ ಆಚರಣೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಎರಡು ಸಾವಿರ ವರ್ಷಗಳ ಹಿಂದೆ ಜರುಗಿದ ಅನೇಕ ಘಟನೆಗಳನ್ನು ಅದು ಇಂದು ನೆನಪಿಸುತ್ತದೆ. ಲಾಕ್‌ಡೌನ್ ಹಾಗೂ ಕೋವಿಡ್-19ನಿಂದ ಕೋಟ್ಯಾಂತರ ಜನರು ಉದ್ಯೋಗವನ್ನು ಕಳೆದುಕೊಂಡು ಬೀದಿಪಾಲಾದರು. ವಲಸೆ ಕಾರ್ಮಿಕರು ನಿರ್ವಸಿತರಾದರು.ಬಡವರು ಬಹಳವಾಗಿ ಬಳಲಿದರು. ಈ ಎಲ್ಲಾ ಯಾತ್ರಾರ್ಥಿಗಳಿಗೆ, ನಿರಾಶ್ರಿತರಿಗೆ ಹಾಗೂ ನಿರ್ಲಕ್ಷಿತರಿಗೆ ಮಾತೆ ಮರಿಯ ಮತ್ತು ಜೋಸೆಪ್ ಸ್ಫೂರ್ತಿ ಹಾಗೂ ಸಾಂತ್ವನವಾಗಿದ್ದಾರೆ. ಸ್ವತಃ ಅವರೇ ತಮ್ಮ ಕಂದ ಯೇಸುವಿನೊಂದಿಗೆ ಇಂತಹ ವಿಷಮ ಪರಿಸ್ಥಿತಿಗೆ ಒಳಗಾದರು. ಕಂದ ಯೇಸು ಹುಟ್ಟುವಾಗಲೇ ಅವರಿಗೆ ಒಂದಿಷ್ಟು ಯೋಗ್ಯ ಸ್ಥಳ ಸಿಗದಾಯಿತು. ಇಂದು ಲಕ್ಷಾಂತರ ಜನ ತಮ್ಮ ನಾಡು, ಮನೆಗಳಿಂದ, ಪ್ರೀತಿಪಾತ್ರರಿಂದ ಹೊರದಬ್ಬಲ್ಪಟ್ಟಿದ್ದಾರೆ. ನಿರಾಶ್ರಿತರು ನಿರ್ಗತಿಕರಾಗಿದ್ದಾರೆ. ನೆಲೆಯಿಲ್ಲದೆ ಅಲೆಮಾರಿಗಳಾಗಿ ಜೀವಿಸು ತ್ತಿದ್ದಾರೆ. ಇವರೆಲ್ಲರಿಗೂ ಈ ಕ್ರಿಸ್ಮಸ್ ಸಾಂತ್ವನದಾ ಯಕವಾಗಿದ್ದು ಹೊಸ ಮಾರ್ಗವನ್ನು ತೋರಿ, ಹೊಸ ಬದುಕಿನೆಡೆಗೆ ಮುನ್ನಡೆಸಲಿ ಎಂಬುದೇ ನಮ್ಮ ಹಾರೈಕೆ. ಎಲ್ಲ ಸುಮನಸ್ಕ ಬಂಧು-ಬಾಂಧವರಿಗೆ ಕ್ರಿಸ್ಮಸ್ ಮಹೋತ್ಸವದ ಶುಭಾಶಯಗಳನ್ನು ಕೋರುತ್ತಾ, ಕರುಣಾಮಯಿ ಯೇಸುಕಂದ ನಿಮ್ಮ ಮನೆ-ಮನಗಳನ್ನು ತನ್ನ ಜ್ಯೋತಿಪ್ರಕಾಶದಿಂದ ಬೆಳಗಿಸಲಿ ಎಂದು ಪ್ರಾರ್ಥಿಸುವುದಾಗಿ ಉಡುಪಿ ಬಿಷಪ್ ಡಾ.ಜೆರಾಲ್ಡ್ ಲೋಬೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News