ಹೆಬ್ರಿ ಗಿಲ್ಲಾಳಿಯಲ್ಲಿ ಪೇಜಾವರ ಮಠದ ನಾಲ್ಕನೇ ಗೋಶಾಲೆಗೆ ಸಿದ್ಧತೆ

Update: 2020-12-26 12:57 GMT

ಉಡುಪಿ, ಡಿ.26: ಜಿಲ್ಲೆಯಲ್ಲಿ ಈಗಾಗಲೇ ಮೂರು ಗೋಶಾಲೆಗಳನ್ನು ತೆರೆದು ಗೋರಕ್ಷಣೆ ಹಾಗೂ ದೇಸಿ ಗೋತಳಿಗಳ ಸಂರಕ್ಷಣೆಯಲ್ಲಿ ಮುತುವರ್ಜಿ ತೋರಿಸುತ್ತಿರುವ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಇದೀಗ ಹೆಬ್ರಿ ತಾಲೂಕು ಗಿಲ್ಲಾಳಿಯಲ್ಲಿ ನಾಲ್ಕನೇ ಗೋಶಾಲೆ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.

ಹೆಬ್ರಿಯ ರಾಘವೇಂದ್ರ ಆಚಾರ್ಯ ಮತ್ತು ಕುಟುಂಬಸ್ಥರು ದಾನವಾಗಿ ನೀಡಿರುವ 7 ಎಕರೆ ಮತ್ತು ರಾಮಕೃಷ್ಣ ಆಚಾರ್ಯ ಎಂಬವರು ನೀಡಿರುವ 2 ಎಕ್ರೆ ಹೀಗೆ ಒಟ್ಟು 9 ಎಕ್ರೆ ಅತ್ಯಂತ ಸುಂದರ ಪ್ರಾಕೃತಿಕ ಸೊಬಗಿನ ತಾಣದಲ್ಲಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯನ್ನು ಆರಂಭಿಸಲು ಸಕಲ ಸಿದ್ಧತೆ ನಡೆದಿದೆ.

ಈ ಸಂಬಂಧ ಶನಿವಾರ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸ್ಥಳಕ್ಕೆ ಭೇಟಿ ನೀಡಿ ಜಾಗದ ಪರಿಶೀಲನೆ ನಡೆಸಿ, ಸ್ಥಳೀಯರೊಂದಿಗೆ ಮುಂದಿನ ಕಾರ್ಯಗಳ ಬಗ್ಗೆ ಚಿಂತನೆ ನಡೆಸಿದರು.

ಪೇಜಾವರ ಮಠದ ಗೋವರ್ಧನಗಿರಿ ಟ್ರಸ್ಟ್ ನೇತೃತ್ವದಲ್ಲಿ ಈಗಾಗಲೇ ಉಡುಪಿಯ ನೀಲಾವರ , ಕೊಡವೂರು, ಹೆಬ್ರಿಯ ಕಬ್ಬಿನಾಲೆ ಸಮೀಪದಲ್ಲಿ ಮೂರು ಗೋಶಾಲೆಗಳು ಯಶಸ್ವಿಯಾಗಿ ನಡೆಯುತ್ತಿವೆ. 56ರ ಹರೆಯದ ಪೇಜಾವರಶ್ರೀಗಳು ತಮ್ಮ 60ನೇ ವರ್ಷಾಚರಣೆ ವೇಳೆಗೆ ಜಿಲ್ಲೆಯಲ್ಲಿ ಒಟ್ಟು ಆರು ಗೋಶಾಲೆ ಸ್ಥಾಪಿಸುವ ಕನಸು ಹೊಂದಿದ್ದಾರೆ.

ರವಿವಾರ ಹೆಬ್ರಿ ಗಿಲ್ಲಾಳಿಯ ಗೋಶಾಲೆ ಪ್ರಾರಂಭವಾಗುವ ಸ್ಥಳದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಶ್ರೀ ವಿಶ್ವೇಶತೀರ್ಥರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಪೆೀಜಾವರ ಮಠದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News