ಉಡುಪಿ: ಮಲಬಾರ್ ಗೋಲ್ಡ್‌ನಿಂದ 9 ವಸತಿರಹಿತ ಕುಟುಂಬಗಳಿಗೆ ಸಹಾಯಧನ ವಿತರಣೆ

Update: 2020-12-28 11:46 GMT

ಉಡುಪಿ, ಡಿ.28: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಉಡುಪಿ ವತಿಯಿಂದ ಸಿಆರ್‌ಎಸ್ ಯೋಜನೆಯಡಿಯಲ್ಲಿ ಒಂಭತ್ತು ಅರ್ಹ ವಸತಿ ರಹಿತ ಕುಟುಂಬಗಳಿಗೆ ಒಟ್ಟು 7 ಲಕ್ಷ ರೂ. ಸಹಾಯಧನವನ್ನು ಸೋಮವಾರ ಸಂಸ್ಥೆಯ ಉಡುಪಿ ಶಾಖೆಯಲ್ಲಿ ವಿತರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಹಣ ಶ್ರೀಮಂತಿಕೆ ಜೊತೆ ಹೃದಯ ಶ್ರೀಮಂತಿಕೆ ಕೂಡ ಇರಬೇಕು. ಸಮಾಜದಲ್ಲಿರುವ ಹಿಂದುಳಿದ ವರ್ಗದವರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅರ್ಥ ಮಾಡಿ ಕೊಳ್ಳುವವರು ಕಡಿಮೆ ಇದ್ದಾರೆ. ಆದರೆ ಈ ಸಂಸ್ಥೆ ಆ ಕೆಲಸ ಮಾಡಿದೆ. ಇದು ಆತ್ಮತೃಪ್ತಿಯ ಕೆಲಸ ಆಗಿದೆ ಎಂದು ತಿಳಿಸಿದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ಶ್ರೀಮಂತರ ಐಶ್ವರ್ಯದಲ್ಲಿ ಬಡವರ ಹಕ್ಕು ಕೂಡ ಇದೆ. ಆ ಹಕ್ಕನ್ನು ನಾವು ಅವರಿಗೆ ನೀಡಬೇಕು. ಆಗ ಮಾತ್ರ ನಮ್ಮ ಐಶ್ವರ್ಯ ಮತ್ತು ಮನಸ್ಸು ಪರಿಶುದ್ಧ ಆಗಲು ಸಾಧ್ಯ. ಈಗಲೂ ಕೂಡ ಈ ಜಗತ್ತಿನಲ್ಲಿ ಬಡವರು ಇರಲು ಶ್ರೀಮಂತರಲ್ಲಿನ ಹೃದಯವಂತಿಕೆ ಹಾಗೂ ಮಾನವೀಯತೆ ಕೊರತೆಯೇ ಕಾರಣವಾಗಿದೆ. ಮಲಬಾರ್ ಗೋಲ್ಡ್ ಸಂಸ್ಥೆಯ ಈ ಕಾರ್ಯವು ಎಲ್ಲ ಶ್ರೀಮಂತರಿಗೆ ಮಾದರಿಯಾಗಿದೆ ಎಂದರು.

ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಸಾಮಾಜಿಕ ಕಾರ್ಯಕರ್ತ ವಿಶ್ವನಾಥ್ ಶೆಣೈ, ತಾಪಂ ಸದಸ್ಯೆ ಡಾ.ಸುನೀತಾ ಡಿ.ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ದಿನೇಶ್ ಬಾಂಧವ್ಯ, ರಾಘವೇಂದ್ರ ಪ್ರಭು ಕರ್ವಾಲು, ಆಸೀಫ್ ಅಪತ್ಭಾಂಧವರ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾ ಸರಸ್ವತಿ ಸ್ವಾಗತಿಸಿದರು. ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರಹ್ಮಾನ್ ವಂದಿಸಿದರು. ಸಂಸ್ಥೆಯ ತಂಝಿಮ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವ್ಯವಸ್ಥಾಪಕ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.

ಮಲಬಾರ ಗೋಲ್ಡ್ ಉಡುಪಿ ಶಾಖಾ ವತಿಯಿಂದ ಹೌಸಿಂಗ್ ಚಾರಿಟಿ ಮೂಲಕ ಮನೆ ಕಟ್ಟಲು 2020ರ ಅಕ್ಟೋಬರ್ ವರೆಗೆ 23 ಕುಟುಂಬಕ್ಕೆ 20 ಲಕ್ಷ ರೂ. ಮೊತ್ತದ ಸಾಮಗ್ರಿಗಳನ್ನು ವಿತರಿಸಲಾಗಿದೆ. 418 ವಿದ್ಯಾರ್ಥಿನಿಯರಿಗೆ 9.70ಲಕ್ಷ ರೂ. ವಿದ್ಯಾರ್ಥಿ ವೇತನ, 415 ರೋಗಿಗಳಿಗೆ 2.33ಲಕ್ಷ ರೂ. ಮೊತ್ತದ ಔಷಧಿ, 2300 ಕುಟುಂಬಗಳಿಗೆ 11.50ಲಕ್ಷ ರೂ. ಮೌಲ್ಯದ ಆಹಾರ ಕಿಟ್ ನೀಡಲಾಗಿದೆ. ವಿವಾಹ ನಿಧಿಯ ಮೂಲಕ 31 ವಧುವಿಗೆ 14.05ಲಕ್ಷ ರೂ. ಮೌಲ್ಯದ ಚಿನ್ನ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News