​ಉಡುಪಿ: ಪಿಯುಸಿ ಶೇ.76.31, ಎಸೆಸೆಲ್ಸಿ ಶೇ.85.3 ಮಕ್ಕಳ ಹಾಜರಾತಿ

Update: 2021-01-06 14:54 GMT

ಉಡುಪಿ, ಜ.6: ಬುಧವಾರ ಉಡುಪಿ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಶೇ.76.31ರಷ್ಟು ಹಾಗೂ ಎಸೆಸೆಲ್ಸಿಯಲ್ಲಿ ಶೇ.85.3ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ. ವಿದ್ಯಾಗಮದಲ್ಲಿ 6ನೇ ತರಗತಿಯ ಶೇ.66 ಹಾಗೂ 9ನೇ ತರಗತಿಯ ಶೇ.65ರಷ್ಟು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದಾರೆ ಎಂದು ವಿದ್ಯಾ ಇಲಾಖೆ ನೀಡಿದ ಮಾಹಿತಿಗಳು ತಿಳಿಸಿವೆ.

ದ್ವಿತೀಯ ಪಿಯುಸಿಯ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಒಟ್ಟು 14797 ವಿದ್ಯಾರ್ಥಿಗಳಿದ್ದು, ಇವರಲ್ಲಿ 11,293 ಮಂದಿ (ಶೇ.76.31) ಇಂದು ತರಗತಿಗೆ ಹಾಜರಾಗಿದ್ದಾರೆ. 7298 ಬಾಲಕರ ಪೈಕಿ 5246 ಮಂದಿ (ಶೇ.71.88) ಹಾಗೂ 7530 ಬಾಲಕಿಯರ ಪೈಕಿ 6037 (ಶೇ.80.17) ಮಂದಿ ಇಂದು ತರಗತಿಯಲ್ಲಿ ಪಾಠ ಕೇಳಿದ್ದಾರೆ.

ಸರಕಾರಿ ಪಿಯು ಕಾಲೇಜುಗಳ 5064 ವಿದ್ಯಾರ್ಥಿಗಳ ಪೈಕಿ 3987 ಮಂದಿ (ಶೇ.78.73), ಅನುದಾನಿತ ಶಾಲೆಗಳ 3639 ವಿದ್ಯಾರ್ಥಿಗಳ ಪೈಕಿ 2826 ಮಂದಿ (ಶೇ.77.65) ಹಾಗೂ ಅನುದಾನ ರಹಿತ ಶಾಲೆಗಳ 6094 ವಿದ್ಯಾರ್ಥಿಗಳ ಪೈಕಿ 4480 ಮಂದಿ (ಶೇ.73.51) ಬುದವಾರದ ತರಗತಿಗಳಿಗೆ ಹಾಜರಾಗಿದ್ದಾರೆ.

ವಿಭಾಗವಾರು ನೋಡುವಾಗ ಕಲಾ ವಿಭಾಗದಲ್ಲಿ ಕಲಿಯುತ್ತಿರುವ 1592 ವಿದ್ಯಾರ್ಥಿಗಳಲ್ಲಿ 1161 ಮಂದಿ (ಶೇ.72.92), ವಾಣಿಜ್ಯ ವಿಭಾಗದ 7729 ವಿದ್ಯಾರ್ಥಿಗಳ ಪೈಕಿ 6098 (ಶೇ.78.89) ಹಾಗೂ ವಿಜ್ಞಾನ ವಿಭಾಗದ 5347 ವಿದ್ಯಾರ್ಥಿಗಳ ಪೈಕಿ 4017 ಮಂದಿ (ಶೇ.75.12) ಇಂದು ಪಾಠ ಕೇಳಿದ್ದಾರೆ.

ಎಸೆಸೆಲ್ಸಿ ಶೇ.85: ಎಸೆಸೆಲ್ಸಿಯಲ್ಲಿ ಜಿಲ್ಲೆಯ ಐದು ವಲಯಗಳಲ್ಲಿ ಒಟ್ಟಾರೆಯಾಗಿ ಶೇ.85.3ರಷ್ಟು ಮಂದಿ ಬುಧವಾರದ ತರಗತಿಗಳಿಗೆ ಖುದ್ದಾಗಿ ಹಾಜರಾಗಿದ್ದಾರೆ. ಇವರಲ್ಲಿ ಸರಕಾರಿ ಶಾಲೆಗಳ ಶೇ.83 ಮಂದಿ, ಅನುದಾನಿತ ಶಾಲೆಗಳ ಶೇ.95 ಹಾಗೂ ಅನುದಾನ ರಹಿತ ಶಾಲೆಗಳ ಶೇ.78ರಷ್ಟು ಮಂದಿ ಮಕ್ಕಳು ಸೇರಿದ್ದಾರೆ ಎಂದು ಸಾರ್ವಜನಿ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ಸರಕಾರಿ ಶಾಲೆಗಳ 6408 ವಿದ್ಯಾರ್ಥಿಗಳ ಪೈಕಿ 4981 ಮಂದಿ, ಅನುದಾನಿತ ಶಾಲೆಗಳ 3166 ವಿದ್ಯಾರ್ಥಿಗಳ ಪೈಕಿ 3009 ಮಂದಿ ಹಾಗೂ ಅನುದಾನ ರಹಿತ ಶಾಲೆಗಳ 5899 ವಿದ್ಯಾರ್ಥಿಗಳ ಪೈಕಿ 4582 ಮಂದಿ ಇಂದು ತರಗತಿಗಳಿಗೆ ಹಾಜರಾಗಿದ್ದರು.

ವಿದ್ಯಾಗಮ ತರಗತಿ: 6 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂದು ನಡೆದ ವಿದ್ಯಾಗಮ ತರಗತಿಗಳಿಗೆ ಕ್ರಮವಾಗಿ ಶೇ.66 ಹಾಗೂ ಶೇ.65ರಷ್ಟು ವಿದ್ಯಾರ್ಥಿಗಳು ಪಾಠ ಆಲಿಸಲು ಹಾಜರಾಗಿದ್ದರು. ಸರಕಾರಿ ಶಾಲೆಗಳ ಎಂಟನೇ ತರಗತಿಯ 175 ವಿದ್ಯಾರ್ಥಿಗಳು ಸಹ ಇಂದು ಕ್ಲಾಸ್‌ಗೆ ಬಂದಿದ್ದರು.

ಆರನೇ ತರಗತಿಗೆ ಸರಕಾರಿ ಶಾಲೆಗಳಲ್ಲಿ ಶೇ.81ರಷ್ಟು, ಅನುದಾನಿತ ಶಾಲೆಗಳಲ್ಲಿ ಶೇ.71 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ.46ರಷ್ಟು ಬಾಲಕ-ಬಾಲಕಿಯರು ಹಾಜರಾಗಿದ್ದರೆ, ಒಂಭತ್ತನೇ ತರಗತಿಗೆ ಸರಕಾರಿ ಶಾಲೆಗಳಲ್ಲಿ ಶೇ.69, ಅನುದಾನಿತ ಶಾಲೆಗಳಲ್ಲಿ ಶೇ.81 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ.45ರಷ್ಟು ವಿದ್ಯಾರ್ಥಿಗಳು ಪಾಠ ಕಲಿಯಲು ಆಗಮಿಸಿದ್ದರು ಎಂದು ಮಾಹಿತಿ ತಿಳಿಸಿದೆ.

ಯಾರಿಗೂ ಕೋವಿಡ್ ಇಲ್ಲ

ಆರಂಭಿಕ ದಿನದಲ್ಲಿ ಬ್ರಹ್ಮಾವರ ವಲಯದ ಜಾನುವಾರಕಟ್ಟೆ ಶಾಲೆಯ ಶಿಕ್ಷಕರೊಬ್ಬರು ಹಾಗೂ ಹೆಬ್ರಿ ವಲಯದ ಮುನಿಯಾಲಿನ ಒಬ್ಬ ಶಾಲಾ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ಬಳಿಕ ಜಿಲ್ಲೆಯಲ್ಲಿ ಯಾವುದೇ ಶಿಕ್ಷಕರಿಗಾಗಲೀ,ವಿದ್ಯಾರ್ಥಿಗಳಲ್ಲಾಗಲಿ ಕೋವಿಡ್ ಪಾಸಿಟಿವ್ ಕಂಡುಬಂದಿಲ್ಲ ಎಂದು ಜಿಲ್ಲಾ ವಿದ್ಯಾಂಗ ಇಲಾಖೆಯ ಅಧಿಕಾರಿಗಳು ಹಾಗೂ ಡಿಎಚ್‌ಓ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News