ಉಳ್ಳಾಲ: ಮನೆಗೆ ನುಗ್ಗಿ ವಾಚ್ ಕಳವು

Update: 2021-07-07 18:13 GMT

ಉಳ್ಳಾಲ: ಎರಡು ಮನೆಗಳ ಬಾಗಿಲು ಮುರಿದು ನುಗ್ಗಿದ ಕಳ್ಳರ ತಂಡ, ಮನೆಯೊಳಗಿದ್ದ ಸೊತ್ತುಗಳನ್ನು ಹಾನಿಗೈದು ಒಂದು ಮನೆಯಿಂದ ವಾಚ್ ಕಳವುಗೈದು ಪರಾರಿಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಮೂಕಾಂಬಿಕಾ ದೇವಸ್ಥಾನ ಬಳಿ ನಿನ್ನೆ ತಡರಾತ್ರಿ ವೇಳೆ ನಡೆದಿದೆ.

ವಿದೇಶದಲ್ಲಿ ನೆಲೆಸಿರುವ ಸುರೇಶ್ ಎಂಬವರಿಗೆ ಸೇರಿದ ಮನೆಯ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು ಕಪಾಟು ಪುಡಿಗೈದು, ಮನೆಯೊಳಗಿನ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಗೈದು ಹಣ ಹಾಗೂ ಒಡವೆಗಾಗಿ ಹುಡುಕಾಡಿ ಏನೂ ಸಿಗದೇ ವಾಪಸ್ಸಾಗಿದ್ದಾರೆ ಎಂದು ತಿಳಿದು ಬಂದಿದೆ.

ಇವರ ನೆರೆಮನೆಯ ರಾಜೇಶ್ ಎಂಬವರ ಮನೆಯೊಳಕ್ಕೆ ಬೀಗ ಒಡೆದು ನುಗ್ಗಿದ ಕಳ್ಳರು ಕಪಾಟನ್ನು ಜಾಲಾಡಿ ಮೂರು ವಾಚ್ ಗಳನ್ನು ಕಳವು ನಡೆಸಿದ್ದು, ಈ ವೇಳೆ ಕೋಣೆಯೊಳಗೆ ಮಲಗಿದ್ದ ರಾಜೇಶ್ ಅವರು ಎಚ್ಚೆತ್ತುಕೊಂಡು ಬೊಬ್ಬಿಡಲು ಆರಂಭಿಸಿದ್ದಾರೆ. ಬೊಬ್ಬೆ ಕೇಳಿ ಮೇಲಿನ ಬಾಡಿಗೆ ಮನೆಯಲ್ಲಿರುವ ಮಂದಿ ಕೆಳಗೆ ಓಡಿ ಬರುವಷ್ಟರಲ್ಲಿ ಕಳ್ಳರ ತಂಡ ಪರಾರಿಯಾಗಿದೆ ಎನ್ನಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News