ಬ್ರಹ್ಮಾವರ ಫ್ಲ್ಯಾಟ್‌ನಲ್ಲಿ ಮಹಿಳೆಯ ಕೊಲೆ ಪ್ರಕರಣ: ತನಿಖೆಗೆ ನಾಲ್ಕು ಪೊಲೀಸ್ ತಂಡ ರಚನೆ

Update: 2021-07-13 07:04 GMT

ಬ್ರಹ್ಮಾವರ, ಜು.13: ಕುಮ್ರಗೋಡು ಗ್ರಾಮದಲ್ಲಿರುವ ಮಿಲನ ರೆಸಿಡೆನ್ಸಿಯ ಫ್ಲ್ಯಾಟ್‌ನಲ್ಲಿ ನಡೆದಿರುವ ವಿಶಾಲಾ ಗಾಣಿಗ(35) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಈ ಸಂಬಂಧ ಒಟ್ಟು ನಾಲ್ಕು ಪೊಲೀಸ್ ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ., ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ತಿಳಿಸಿದ್ದಾರೆ.

ಫ್ಲ್ಯಾಟ್‌ನಲ್ಲಿ ಸಿಸಿಟಿವಿ ಇಲ್ಲ: ಪೊಲೀಸರು ಕೊಲೆಗಡುಕರ ಶೋಧ ಕಾರ್ಯ ತೀವ್ರಗೊಳಿಸಿದ್ದು, ಈ ನಿಟ್ಟಿನಲ್ಲಿ ಸಿಸಿಟಿವಿ ಫೂಟೇಜ್‌ಗಳನ್ನು ಕಲೆ ಹಾಕುವ ಕಾರ್ಯವನ್ನು ನಡೆಸುತ್ತಿದ್ದಾರೆ.

ಆದರೆ ಕೊಲೆ ನಡೆದ ಮಿಲನ ರೆಸಿಡೆನ್ಸಿಯಲ್ಲಿ ಯಾವುದೇ ಸಿಸಿಟಿವಿ ಅಳವಡಿಸದಿರುವುದು ಸಮಸ್ಯೆಯಾಗಿದೆ. ಆದುದರಿಂದ ಪೊಲೀಸರು ಅಲ್ಲಿನ ಸುತ್ತಮುತ್ತಲಿನ ಅಂಗಡಿ, ಕಟ್ಟಡಗಳಲ್ಲಿ ಇರುವ ಸಿಸಿಟಿವಿಗಳನ್ನು ಪರಿಶೀಲನೆ ನಡೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈವರೆಗೆ ಕೊಲೆ ಆರೋಪಿಗಳಿಗೆ ಸಂಬಂಧಿಸಿದ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪತಿ ಜೊತೆ ದುಬೈಯಲ್ಲಿ ವಾಸ

ಗುಜ್ಜಾಡಿ ಗ್ರಾಮದ ನಾಯಕವಾಡಿಯ ವಾಸು ಗಾಣಿಗ ಎಂಬವರ ಕೊನೆಯ ಪುತ್ರಿ ವಿಶಾಲ ಗಾಣಿಗ, ಬೀಜೂರು ಚಾರುಕೊಡ್ಲು ನಿವಾಸಿ ರಾಮಕೃಷ್ಣ ಗಾಣಿಗ ಎಂಬವರನ್ನು ವಿವಾಹವಾಗಿ ಕುಮ್ರಗೋಡು ಗ್ರಾಮದ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ನಂತರ ಈಕೆ ತನ್ನ ಗಂಡ ಹಾಗೂ ಮಗು ಆರ್ವಿಯೊಂದಿಗೆ ದುಬೈಯಲ್ಲಿ ವಾಸವಾಗಿದ್ದರು.

ಸುಮಾರು ಮೂರು ತಿಂಗಳ ಹಿಂದೆ ಇವರು ಮೂವರು ಊರಿಗೆ ಬಂದಿದ್ದು, ರಾಮಕೃಷ್ಣರವರ ಹಿರಿಯರ ಆಸ್ತಿಯಲ್ಲಿ ಅವರ ಪಾಲಿಗೆ ಬರುವ ಆಸ್ತಿಗೆ ಸಂಬಂಧಿಸಿದ ದಸ್ತಾವೇಜುಗಳಿಗೆ ಸಹಿ ಹಾಕಲು ವಾಸು ಗಾಣಿಗ ಅವರಿಗೆ ಅಧಿಕಾರ ಪತ್ರವನ್ನು ನೀಡಿ ಇವರು ಮೂವರು ವಾಪಸ್ ದುಬೈಗೆ ಹೋಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪತಿಯ ಆಸ್ತಿ ಪಾಲಿಗೆ ಬಂದಿದ್ದರು

ಆಸ್ತಿ ಪಾಲಿನ ಸಂಬಂಧ ವಿಶಾಲಾ ಗಾಣಿಗ ಮತ್ತು ಮಗು ಆರ್ವಿ ದುಬೈಯಿಂದ ಜು.2ರಂದು ಊರಿಗೆ ಬಂದು ಕುಮ್ರಗೋಡುವಿನ ಫ್ಲ್ಯಾಟ್‌ನಲ್ಲಿ ವಾಸಮಾಡಿ ಕೊಂಡಿದ್ದರು. ಜು.7ರಂದು ರಾಮಕೃಷ್ಣರವರ ಆಸ್ತಿಪಾಲು ಪಟ್ಟಿ ಆಗಿದ್ದು, ಜು.12ರಂದು ವಿಶಾಲಾ ಗಾಣಿಗ ತನ್ನ ತಂದೆ ತಾಯಿ ಮತ್ತು ಮಗನೊಂದಿಗೆ ರಿಕ್ಷಾದಲ್ಲಿ ಫ್ಲ್ಯಾಟ್‌ನಿಂದ ತಾಯಿ ಮನೆಯಾದ ಗುಜ್ಜಾಡಿಗೆ ಬಂದಿದ್ದರು.

ನಂತರ ವಿಶಾಲಾ ಗಾಣಿಗ ನಾನು ಬ್ರಹ್ಮಾವರ ಕೆನರಾ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಆ ಹಣವನ್ನು ಗಂಡನ ಮನೆಗೆ ಕೊಟ್ಟು ಬರುವುದಾಗಿ ಹೇಳಿ ಅದೇ ರಿಕ್ಷಾದಲ್ಲಿ ವಾಪಸ್ ಹೊರಟು ಹೋಗಿದ್ದರು. ನಂತರ ಮಧ್ಯಾಹ್ನ ಆದರೂ ವಿಶಾಲಾ ಮನೆಗೆ ಬಾರದೆ ಇದ್ದುದರಿಂದ ಆಕೆಯ ತಂದೆ ಮೊಬೈಲ್ ಗೆ ಕರೆ ಮಾಡಿದಾಗ ನಾಟ್ ರೀಚೆಬಲ್ ಬಂದಿತ್ತು.

ಮಧ್ಯಾಹ್ನ ಕೊನೆಯ ಮೆಸೇಜ್

ತಂದೆ ವಿಶಾಲಾರ ಅವರ ತಂದೆ ವಿಶಾಲಾ ಅವರ ಪತಿ ರಾಮಕೃಷ್ಣಗೆ ಕರೆಮಾಡಿ ವಿಚಾರಿಸಿದಾಗ, ಸುಮಾರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಕೆ ತಾನು ಸಾಲಿಗ್ರಾಮದಲ್ಲಿ ಇದ್ದೇನೆ. ಬ್ರಹ್ಮಾವರ ಬ್ಯಾಂಕಿಗೆ ಹೋಗಿ ನಂತರ ಮಗುವಿನ ಹುಟ್ಟುಹಬ್ಬಕ್ಕೆ ಕೇಕ್ ಆರ್ಡರ್ ಮಾಡಿರುವುದಾಗಿ ಮೆಸೇಜ್ ಮಾಡಿದ್ದಳು ಎಂದು ತಿಳಿಸಿದ್ದರು.

ಸ್ವಲ್ಪಹೊತ್ತಿನ ನಂತರ ರಾಮಕೃಷ್ಣ, ತನ್ನ ಮಾವ ವಾಸು ಗಾಣಿಗರಿಗೆ ಕರೆ ಮಾಡಿ ವಿಶಾಲ ಫೋನ್ ಗೆ ಸಿಗುತ್ತಿಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ವಾಸು ಗಾಣಿಗ ಮತ್ತು ಅವರು ಇನ್ನೊಬ್ಬಳು ಮಗಳು ವಿನಯಾ ಸಂಜೆ 6:10ರ ಸುಮಾರಿಗೆ ಫ್ಲ್ಯಾಟ್‌ಗೆ ಹೋದರು. ಆಗ ಫ್ಲ್ಯಾಟ್‌ನ ಮುಖ್ಯದ್ವಾರ ಲಾಕ್ ಆಗಿರುವುದು ಕಂಡುಬಂತು. ಬಳಿಕ ಅವರಲ್ಲಿದ್ದ ಕೀಯಿಂದ ಬಾಗಿಲು ತೆರೆದು ಒಳಗೆ ನೋಡಿದಾಗ ಬೆಡ್ ರೂಮ್‌ನ ನೆಲದ ಮೇಲೆ ವಿಶಾಲಾ ಕೊಲೆಯಾಗಿ ಬಿದ್ದಿರುವುದು ಕಂಡುಬಂತು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಕುತ್ತಿಗೆ ಬಿಗಿದು ಕೊಲೆ

ಆಕೆಯ ದೇಹದ ಪಕ್ಕದಲ್ಲಿ ತುಂಡಾದ ಎಲೆಕ್ಟ್ರಾನಿಕ್ ಉಪಕರಣದ ಪವರ್ ಕೇಬಲ್ ತುಂಡಾಗಿ ಬಿದ್ದುಕೊಂಡಿದ್ದು, ಕುತ್ತಿಗೆಯಲ್ಲಿ ಚಾರ್ಜರ್ ಪವರ್ ಕೇಬಲ್ ಬಿಗಿದು ಸುತ್ತಿಕೊಂಡಿರುವುದು ಕಂಡುಬಂದಿದೆ. ಆಕೆಯು ಧರಿಸಿದ್ದ ಎರಡು ಗಟ್ಟಿ ಚಿನ್ನದ ಬಳೆಗಳು, ಕರಿಮಣಿ ಸರ ಮತ್ತು ಒಂದ ಜೊತೆ ಕಿವಿಯೋಲೆ ಸೇರಿದಂತೆ ಒಟ್ಟು 2 ಲಕ್ಷ ರೂ. ವೌಲ್ಯದ 50 ಗ್ರಾಂ ತೂಕದ ಚಿನ್ನಾಭರಣಗಳು ಇಲ್ಲದೇ ಇರುವುದು ಕಂಡುಬಂದಿದೆ. ದುಷ್ಕರ್ಮಿಗಳು ಚಿನ್ನಾಭರಣಗಳನ್ನು ದರೋಡೆ ಮಾಡುವ ಉದ್ದೇಶದಿಂದ ವಿಶಾಲಾ ಗಾಣಿಗರನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿ ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿ ಮೃತರ ತಂದೆ ವಾಸು ಗಾಣಿಗ ಬಹ್ಮಾವರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News