ಮಂಗಳೂರು ವಿವಿಯಲ್ಲಿ ಶೀಘ್ರದಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ: ಪ್ರೊ.ಯಡಪಡಿತ್ತಾಯ

Update: 2021-07-13 10:57 GMT

ಕೊಣಾಜೆ, ಜು.13: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಲಾಗುವುದು. ಅದರಲ್ಲಿ ಸಂಶೋಧನೆಗೆ ವಿಶೇಷ ಒತ್ತು ನೀಡುವ ಉದ್ದೇಶದಿಂದ ಈಗಾಗಲೇ ಕ್ರಿಯಾಸಮಿತಿಯನ್ನು ರಚಿಸಲಾಗಿದ್ದು, ಪ್ರಸಾರಾಂಗದ ಮೂಲಕ ಸಂಶೋಧನ ಕೃತಿಗಳ ಪ್ರಕಟನೆಯನ್ನು ಉತ್ತೇಜಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಹೇಳಿದ್ದಾರೆ.

ಪ್ರಸಾರಾಂಗ ಪ್ರಕಟಿಸಿದ ನಾಲ್ಕು ಕೃತಿಗಳನ್ನು ಮಂಗಳವಾರ ಮಂಗಳೂರು ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

 ಡಾ.ಎನ್.ಸುಕುಮಾರ ಗೌಡಯವರ 'An introduction to English Language Curriculum', ಡಾ.ಸಾಯಿಗೀತಾ ಅವರ ತುಳುವ ನೆಲೆ, ಬಿ.ಎ.ಶಂಸುದ್ದೀನ್ ಅವರ ವಿಶಿಷ್ಟ ಬ್ಯಾರಿ ಜನಾಂಗ, ಮುದ್ದು ಮೂಡುಬೆಳ್ಳೆ ಅವರ 'ಪರಿವರ್ತನಶೀಲ ತುಳು ರಂಗಭೂಮಿ' ಕೃತಿಗಳನ್ನು ಅವರು ಬಿಡುಗಡೆಗೊಳಿಸಿದರು.

ವೃತ್ತಿಯ ಜೊತೆಗೆ ಪ್ರವೃತ್ತಿ, ಸಮಾಜಮುಖಿ ಚಿಂತನೆಗಳನ್ನು ರೂಢಿಸಿಕೊಂಡಾಗ ಮನುಷ್ಯನ ವ್ಯಕ್ತಿತ್ವಕ್ಕೆ ಘನತೆ ಬರುತ್ತದೆ ಎಂದ ಅವರು, ಬ್ಯಾರಿ ಸಾಹಿತ್ಯ ಮತ್ತು ತುಳು ರಂಗಭೂಮಿಯ ಬಗೆಗೆ ಸಮಗ್ರ ಸೂಕ್ಷ್ಮ ಅಧ್ಯಯನಗಳು ಆಗಬೇಕಿವೆ ಎಂದರು.

ವಿವಿಯ ಹಣಕಾಸು ಅಧಿಕಾರಿ ಪ್ರೊ.ಬಿ.ನಾರಾಯಣ ಮಾತನಾಡಿ, ಸ್ಥಳೀಯ ಭಾಷೆ ಸಾಹಿತ್ಯ ಸಂಸ್ಕೃತಿಯ ಕುರಿತಾದ ಪ್ರಕಟನೆಗಳನ್ನು ಪ್ರಸಾರಾಂಗದ ಮೂಲಕ ಪ್ರಕಟಿಸಲು ಅವಕಾಶವಿದೆ ಎಂದರು.

ಲೇಖಕರಾದ ಡಾ.ಎನ್.ಸುಕುಮಾರ ಗೌಡ ಪುತ್ತೂರು, ಡಾ.ಸಾಯಿಗೀತಾ ದೇರಳಕಟ್ಟೆ, ಬಿ.ಎ.ಶಂಸುದ್ದೀನ್ ಮಡಿಕೇರಿ, ಮುದ್ದು ಮೂಡುಬೆಳ್ಳೆ ಮಾತನಾಡಿದರು.

ಪ್ರಸಾರಾಂಗದ ನಿರ್ದೇಶಕ ಪ್ರೊ. ಅಭಯಕುಮಾರ್ ಪ್ರಸ್ತಾವನೆ ಮಾಡಿದರು. ಸಹಾಯಕ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ವಿವಿಯ ಗ್ರಂಥಾಲಯದ ಮುಖ್ಯಸ್ಥ ಡಾ.ಪುರುಷೋತ್ತಮ ಗೌಡ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಾಹಿತ್ಯದ ವಾತಾವರಣ ಇದ್ದಲ್ಲಿ ಸಾಹಿತಿಗಳು, ಸಾಹಿತ್ಯದ ಕೆಲಸಗಳು ಹೆಚ್ಚೆಚ್ಚು ನಡೆಯುತ್ತವೆ. ಮಂಗಳೂರು ವಿವಿಯ ಬ್ಯಾರಿ ಅಧ್ಯಯನ ಪೀಠದಿಂದ ಬ್ಯಾರಿ ಜನಾಂಗದ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಸಮಗ್ರ ಸಂಪುಟವೊಂದು ರಚನೆಯಾಗಬೇಕಿದೆ. ಇದು ಬಹಳ ಅಗತ್ಯದ ಹಾಗೂ ಮಹತ್ವದ ಕೃತಿಯಾಗಲಿದೆ.

ಬಿ.ಎ.ಸಂಶುದ್ದೀನ್, ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News