ಶಿರ್ವ; ಮದ್ಯ ಕುಡಿಸಿ ಕೊಲೆ ಪ್ರಕರಣ : ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ

Update: 2021-07-22 15:15 GMT

ಉಡುಪಿ, ಜು.22: ಕುಡಿದ ಮತ್ತಿನಲ್ಲಿ ಅವಾಚ್ಯವಾಗಿ ನಿಂದಿಸುತ್ತಾನೆ ಎನ್ನುವ ಕ್ಷುಲ್ಲಕ ಕಾರಣಕ್ಕೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆ ಅತಿಯಾಗಿ ಮದ್ಯ ಕುಡಿಸಿ ಸ್ನೇಹಿತರೇ ಕೊಲೆ ಮಾಡಿರುವ ಪ್ರಕರಣದ ಆರೋಪಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಜೆ.ಎನ್. ಗುರುವಾರ ತೀರ್ಪು ನೀಡಿದ್ದಾರೆ.

 ಪೆರ್ಣಂಕಿಲ ನಿವಾಸಿ ರಾಜೇಂದ್ರ ನಾಯ್ಕ(49) ಹಾಗೂ ಮೂಡುಬೆಳ್ಳೆ ಕಟ್ಟಿಂಗೇರಿ ಗ್ರಾಮದ ನಿವಾಸಿ ಸಂತೋಷ್ ಪೂಜಾರಿ (41) ಪ್ರಕರಣದ ಆರೋಪಿಗಳಾಗಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗಳಾಗಿದ್ದಾರೆ. ಆಂಡ್ರೂ ಮಾರ್ಟಿಸ್ ಯಾನೆ ಅಣ್ಣು ಪೊರ್ಬುಲು ಕೊಲೆಯಾದವರು. ಆಂಡ್ರೂ ಕೂಲಿ ಕೆಲಸ ಮಾಡಿಕೊಂಡಿದ್ದು, ಆರೋಪಿಗಳಿಗೆ ಪರಿಚಿತರಾಗಿದ್ದರು.

ಮೃತ ಮಾರ್ಟಿಸ್, ರಾಜೇಂದ್ರ ನಾಯ್ಕಾ ಹಾಗೂ ಸಂತೋಷ್ ಪೂಜಾರಿ ಅವರ ಮನೆಯವರನ್ನು ಅವಾಚ್ಯವಾಗಿ ಬೈಯುತ್ತಿದ್ದು, ಇದೇ ದ್ವೇಷದಿಂದ ಕೊಲೆಗೆ ಸಂಚು ರೂಪಿಸಿದ್ದರು. 2019ರ ಜ. 25ರಂದು ಬೆಳಗ್ಗೆ 8:30 ಕ್ಕೆ ಚೇತನಾ ವೈನ್‌ಶಾಪ್‌ಗೆ ಬಂದ ಅಂಡ್ರ್ಯೂ ಮಾರ್ಟಿಸ್ ಅವರನ್ನು ಶಾಮಿಯಾನ ಕೆಲಸವಿದೆ ಎಂದು ನೆಪ ಹೇಳಿ ಅಲ್ಲಿ ಮದ್ಯ ಸೇವಿಸಿ ಅಲ್ಲಿಂದ ಮತ್ತಷ್ಟು ಮದ್ಯ ಪಾರ್ಸೆಲ್ ತೆಗೆದುಕೊಂಡು ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ತಾಕಡಬೈಲಿನ ಹಾಡಿಯಲ್ಲಿ ಕೈ ಕಾಲು ಕಟ್ಟಿ, ಕೋಲಿನಿಂದ ಹೊಡೆದು ನೈಲಾನ್ ಹಗ್ಗದಿಂದ ಕುತ್ತಿಗೆಗೆ ಕಟ್ಟಿ ಇನ್ನೊಂದು ತುದಿಯನ್ನು ಮರಕ್ಕೆ ಕಟ್ಟಿ ಎಳೆದು ಉಸಿರು ಕಟ್ಟಿಸಿ ಕೊಲೆ ಮಾಡಲಾಗಿತ್ತು.

ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಪು ವೃತ್ತ ನಿರೀಕ್ಷಕ ಮಹೇಶ್‌ ಪ್ರಸಾದ್ ತನಿಖೆ ನಡೆಸಿದ್ದರು. ಅಂದಿನ ವೃತ್ತ ನಿರೀಕ್ಷಕ ಶಾಂತಾರಾಮ್ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ 2019 ಎ.8ರಂದು ದೋಷರೋಷಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ 31 ಸಾಕ್ಷಿಗಳ ಪೈಕಿ ಪ್ರಮುಖ 12 ಸಾಕ್ಷಿಗಳಿಂದ ಹೇಳಿಕೆ ಪಡೆದುಕೊಳ್ಳಲಾಗಿತ್ತು ಹಾಗೂ 29 ದಾಖಲೆಗಳನ್ನು ಗುರುತಿಲಾಗಿತ್ತು.

ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ನ್ಯಾಯಧೀಶ ಸುಬ್ರಹ್ಮಣ್ಯ ಜೆ.ಎನ್. ಜು.19 ರಂದು ಆರೋಪಿಗಳಿಬ್ಬರನ್ನು ದೋಷಿಗಳೆಂದು ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದ್ದರು. ಈ ಬಗ್ಗೆ ಗುರುವಾರ ತನ್ನ ತೀರ್ಪು ನೀಡಿದ ನ್ಯಾಯಾಧೀಶರು ಆರೋಪಿಗಳಿಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಶಾಂತಿಬಾಯಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News