ಸರಕಾರಿ ಮೆಡಿಕಲ್ ಕಾಲೇಜ್‌ಗೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಧರಣಿ

Update: 2021-07-29 15:28 GMT

ಮಂಗಳೂರು, ಜು. 29: ದ.ಕ. ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿರುವ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ನಡೆಸುತ್ತಿರುವ ಜನಾಂದೊಲನದ ಭಾಗವಾಗಿ ಗುರುವಾರ ಬೆಳಗ್ಗೆ ನಗರದ ಮಿನಿ ವಿಧಾನಸೌಧ ಮುಂಭಾಗದಲ್ಲಿ ವಿದ್ಯಾರ್ಥಿಗಳು ಧರಣಿ ನಡೆಸಿದರು.

ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಶ್ರಫ್ ಮಾತನಾಡಿ, ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಹೋರಾಟ ಕೇವಲ ಕ್ಯಾಂಪಸ್ ಫ್ರಂಟ್‌ನ ಹೋರಾಟ ವಲ್ಲ. ಇದು ಜಿಲ್ಲೆಯ ಜನತೆಯ ಹೋರಾಟವಾಗಿದೆ. ಇದು ಸಂಸದರು, ಶಾಸಕರ ನಿರ್ಲಕ್ಷವಾಗಿದೆ. ಎಲ್ಲ ಸಂಘಟನೆಗಳ ನಾಯಕರು ಈ ಹೋರಾಟಕ್ಕೆ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.

ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಮಾತನಾಡಿ, ಎಂಟು ಶಾಸಕರು, ಏಳು ವಿಧಾನ ಪರಿಷತ್ ಸದಸ್ಯರು, ಓರ್ವ ಲೋಕಸಭಾ ಸದಸ್ಯ, ಇಬ್ಬರು ರಾಜ್ಯ ಸಚಿವರು, ಓರ್ವ ಕೇಂದ್ರ ಸಚಿವೆ ಸೇರಿದಂತೆ ಇಷ್ಟು ಜನರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಆದಾಗ್ಯೂ, ಮೆಡಿಕಲ್ ಕಾಲೇಜು ಇಷ್ಟರವರೆಗೆ ಜಿಲ್ಲೆಗೆ ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದಾದರೆ ಇದು ಜಿಲ್ಲೆಯ ಜನತೆಗೆ ಮಾಡುವ ಘೋರ ಅನ್ಯಾಯವಾಗಿದೆ ಎಂದು ನುಡಿದರು.

ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಮಾತನಾಡಿ, ಖಾಸಗಿ ವೈದ್ಯಕೀಯ ಕಾಲೇಜುಗಳ ಅಟ್ಟಹಾಸವನ್ನು ನಿಲ್ಲಿಸಲು ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆಯು ಮುಂಚೂಣಿಯಲ್ಲಿದೆ. ಈ ಧರಣಿಯು ಹೋರಾಟದ ಮೊದಲ ಹಂತವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಜನತೆಯನ್ನು ಸೇರಿಸಿ ಬೃಹತ್ ಹೋರಾಟವನ್ನು ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಎಂಬುದು ಸಂವಿಧಾನ ನೀಡಿದ ಮೂಲಭೂತ ಹಕ್ಕಾಗಿದೆ. ಈ ಎರಡರಲ್ಲೂ ಖಾಸಗೀಕರಣ ಸಲ್ಲದು. ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಅತ್ಯಾವಶ್ಯಕವಾಗಿದ್ದು, ಈ ಹೋರಾಟದ ಮುಂದುವರಿಕೆ ಅನಿವಾರ್ಯವಾಗಿದೆ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಇಸ್ಮತ್ ಫಜೀರ್ ಮಾತನಾಡಿ, ಜಿಲ್ಲೆಯಲ್ಲಿ ವೈದ್ಯಕೀಯ ಸೀಟು ನೀಡುತ್ತಿರುವುದು ಶ್ರೀಮಂತಿಕೆಯ ಆಧಾರದಲ್ಲಿಯೇ ಹೊರತು ಅವರ ಸಾಮರ್ಥ್ಯದ ಆಧಾರದಲ್ಲಿ ಅಲ್ಲ ಎಂಬುದು ವಿಷಾದನೀಯ. ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುವ ಮೂಲಕ ಜಿಲ್ಲೆಯ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಬೇಕಾಗಿದೆ ಎಂದು ಹೇಳಿದರು.

ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಮೆಡಿಕಲ್ ಮಾಫಿಯಾಗೆ ಕಡಿವಾಣ ಹಾಕಬೇಕಾದರೆ ದ.ಕ. ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಅವಶ್ಯಕ. ಲಕ್ಷ- ಕೋಟಿ ಶುಲ್ಕ ನೀಡಿ ವೈದ್ಯರಾದ ಜಿಲ್ಲೆಯ ಹಲವಾರು ಖಾಸಗಿ ವೈದ್ಯರು ಆರೋಗ್ಯ ಕ್ಷೇತ್ರವನ್ನು ವ್ಯಾಪಾರೀಕರಣ ಮಾಡದೆ ಮತ್ತೇನು ಮಾಡುವರು? ಎಂದು ಪ್ರಶ್ನಿಸಿದರು.

 ಇನಾಯತ್ ಅಲಿ ಸ್ವಾಗತಿಸಿದರು. ಮುನೀರ್ ಬಜಾಲ್ ವಂದಿಸಿದರು. ಈ ಸಂದರ್ಭದಲ್ಲಿ ಕ್ಯಾಂಪಸ್ ಪ್ರಂಟ್ ಜಿಲ್ಲಾಧ್ಯಕ್ಷರಾದ ಸಿರಾಜ್ ಸುರತ್ಕಲ್, ಜಿಲ್ಲಾ ಮುಖಂಡರಾದ ಶರ್ಫುದ್ದೀನ್ ಬಜ್ಪೆ, ಅನ್ಸಾರ್ ಪುತ್ತೂರು, ಯಾಸೀನ್ ಬೆಳ್ತಂಗಡಿ, ಫಯಾಝ್ ವಿಟ್ಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News