ಆಸ್ಕರ್ ಆರೋಗ್ಯ ವಿಚಾರಿಸಲು ಪುದುಚೇರಿ ಮಾಜಿ ಸಿಎಂ ಮಂಗಳೂರಿಗೆ ಭೇಟಿ
ಮಂಗಳೂರು: ಕಳೆದ ಮೂರು ವಾರಗಳಿಗೂ ಹೆಚ್ಚು ಕಾಲ ನಗರದ ಯೆನೆಪೊಯ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಹಿರಿಯ ಕಾಂಗ್ರೆಸಿಗ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಲು ಪುದುಚೇರಿಯ ಮಾಜಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಈ ಸಂದರ್ಭ ಅವರು ಆಸ್ಕರ್ ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದು, ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ಜಿಲ್ಲಾ ಕಾಂಗ್ರೆಸ್ನ ಮುಖಂಡರು ಇದ್ದರು.
ಕಳೆದೊಂದು ವಾರದಿಂದ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಬಹುತೇಕ ಸಹಜ ಉಸಿರಾಟ ನಡೆಸುವಷ್ಟು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕುಟುಂಬಸ್ಥರ ಧ್ವನಿಯನ್ನು ಗ್ರಹಿಸಿ ಅದಕ್ಕೆ ತಲೆ, ಕೈ-ಕಾಲು ಆಡಿಸುವ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಪ್ರಜ್ಞೆ ಬರಲು ಇನ್ನೂ ಕೆಲದಿನ ಕಾಯಲಾಗುತ್ತಿದೆ. ವಾರಕ್ಕೆ ಮೂರು ಬಾರಿ ಆಸ್ಕರ್ ಅವರಿಗೆ ಡಯಾಲಿಸಿಸ್ ನೆರವೇರಿಸಲಾಗುತ್ತಿದ್ದು, ಗುರುವಾರವೂ ಯಶಸ್ವಿಯಾಗಿ ಡಯಾಲಿಸಿಸ್ ನಡೆಸಲಾಗಿದೆ. ಕೆಲಕಾಲ ರಕ್ತದೊತ್ತಡದಲ್ಲಿ ಏರಿಳಿತ ಕಂಡುಬಂದಿದ್ದರೂ ಪುನಃ ಸಹಜ ಸ್ಥಿತಿಗೆ ಬಂದಿದೆ. ಸಕ್ಕರೆ ಅಂಶವೂ ನಾರ್ಮಲ್ ಸ್ಥಿತಿಯಲ್ಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.