ದ.ಕ.ಜಿಲ್ಲೆ : ಪೊಲೀಸ್ ಇಲಾಖೆಯಿಂದ ಅಭ್ಯರ್ಥಿಗಳಿಗೆ ತರಬೇತಿ

Update: 2021-08-08 16:06 GMT
ಎನ್. ಶಶಿಕುಮಾರ್

ಮಂಗಳೂರು, ಆ.8: ನಗರ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ನೇಮಕ ಆಗುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರ ಸಂಖ್ಯೆ ಕಡಿಮೆಯಾಗುತ್ತಿದೆ. ಇದನ್ನು ನಿವಾರಿಸಲು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೊಸ ಹೆಜ್ಜೆ ಇರಿಸಿದ್ದು, ಜಿಲ್ಲೆಯ ಅಭ್ಯರ್ಥಿಗಳಿಗೆ ಒಂದು ತಿಂಗಳ ಕಾರ್ಯಾಗಾರವನ್ನು ಆಯೋಜಿಸಿದ್ದಾರೆ.

ಪೊಲೀಸ್ ಇಲಾಖೆಗೆ ಇತ್ತೀಚಿನ ತಂಡಗಳಲ್ಲಿ ನೇಮಕಾತಿ ಹೊಂದಿದ ಪಿಎಸ್‌ಐ ಹಾಗೂ ಸಿಬ್ಬಂದಿಯನ್ನು ಒಳಗೊಂಡ ನುರಿತ ತಂಡ ಒಂದು ತಿಂಗಳ ಕಾಲ ತರಬೇತಿ ನೀಡಲಿದೆ. ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಮೊದಲ ಆದ್ಯತೆಯಿದ್ದು, ನಂತರದಲ್ಲಿ ಉಡುಪಿ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.

ತರಬೇತಿ ಕಾರ್ಯಾಗಾರಕ್ಕೆ ಹಾಜರಾಗಲು ಬಯಸಲು ಅಭ್ಯರ್ಥಿಗಳು ವಿಳಾಸದ ಬಗ್ಗೆ ಅಧಿಕೃತ ದಾಖಲಾತಿ ಸಲ್ಲಿಸಬೇಕು. ಯಾವುದೇ ಘಟಕದಲ್ಲಿ ಪಿಎಸ್‌ಐ ಅಥವಾ ಕಾನ್‌ಸ್ಟೇಬಲ್ ನೇಮಕಾತಿಯ ದೈಹಿಕ-ಸಹಿಷ್ಣುತೆ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಬಗ್ಗೆ ದಾಖಲಾತಿ ಸಲ್ಲಿಸುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳು ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಇದು ಕ್ರಾಶ್ ಕೋರ್ಸ್ ರೀತಿಯ 30 ದಿನಗಳ ಕಾರ್ಯಾಗಾರವಾಗಿದ್ದು, ಪುರುಷ ಮತ್ತು ಮಹಿಳಾ ಆಕಾಂಕ್ಷಿಗಳಿಗೂ ಅವಕಾಶ ನೀಡಲಾಗಿದೆ. ಮೊದಲನೇ ಹಂತದಲ್ಲಿ 100 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ಊಟ ಮತ್ತು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಸತಿ ಸೌಲಭ್ಯ ಉಚಿತವಾಗಿದ್ದು, ಕಡ್ಡಾಯವಾಗಿ ನಿಗದಿಪಡಿಸಿದ ಸ್ಥಳದಲ್ಲಿಯೇ ವಾಸ್ತವ್ಯ ಇರಬೇಕು.

ತರಗತಿಯು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಕಡ್ಡಾಯವಾಗಿದ್ದು, ಅಭ್ಯರ್ಥಿಗಳು ಇಲ್ಲಿಯೇ ಇದ್ದು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಅವಶ್ಯಕ ಅಧ್ಯಯನ ಸಾಮಗ್ರಿಗಳನ್ನು ವೈಯುಕ್ತಿಕವಾಗಿ ಅಭ್ಯರ್ಥಿಗಳೇ ಖರೀದಿ ಮಾಡಬೇಕು.

ಈ ತರಬೇತಿಗೆ ಆಸಕ್ತ ಆಕಾಂಕ್ಷಿಗಳು, ಸೋಮವಾರ (ಆ.9)ದಿಂದ ಮಂಗಳೂರು ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ತೆರೆಯಲಾಗುವ ಕೇಂದ್ರದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಹೆಸರನ್ನು ನೋಂದಣಿ ಮಾಡಿಸಬಹುದು.

ಈ ಕಾರ್ಯಾಗಾರಕ್ಕೆ ಸಂತ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿಯು ವಾಸ್ತವ್ಯ, ಕ್ಲಾಸ್ ರೂಂ ಮತ್ತು ಗ್ರಂಥಾಲಯದ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಆಸಕ್ತ ಆಕಾಂಕ್ಷಿಗಳು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಘಟಕದ ಈ ಕಾರ್ಯಾಗಾರದ ಪ್ರಯೋಜನ ಪಡೆಯುವಂತೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News