ರಾಜ್ಯ- ಇಂಧನ ಇಲಾಖೆ ಹಿತಾಸ್ತಕಿ ಕಾಪಾಡಲು ಸರಕಾರ ಬದ್ಧ: ವಿದ್ಯುತ್ ಮಸೂದೆ ಕುರಿತು ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯೆ
ಉಡುಪಿ, ಆ.9: ಕೇಂದ್ರ ಸರಕಾರದ ವಿದ್ಯುತ್ ಮಸೂದೆಯಲ್ಲಿನ ಖಾಸಗೀ ಕರಣ ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಸಂಘ ಮತ್ತು ಅಧಿಕಾರಿ ಅಸೋಸಿಯೇಶನ್ ಒಕ್ಕೂಟ ಆ.10ರಂದು ನಡೆಯುವ ಪ್ರತಿಭಟನೆಗೆ ಸಂಬಂಧಿಸಿ ಈಗಾಗಲೇ ನನಗೆ ಮನವಿ ನೀಡಿದ್ದಾರೆ. ಸದ್ಯ ನನಗೆ ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಈ ವಿಚಾರದಲ್ಲಿ ನಮ್ಮ ರಾಜ್ಯ ಮತ್ತು ಇಲಾಖೆ ಹಿತಾಸಕ್ತಿ ಕಾಪಾಡಲು ರಾಜ್ಯ ಸರಕಾರ ಬದ್ಧವಾಗಿದೆ. ಕೇಂದ್ರದ ಮಸೂದೆಯನ್ನು ನೋಡಿ ಪರಿಶೀಲಿಸಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ.13ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿಯನ್ನು ಮೊದಲು ತೆಗೆದುಕೊಂಡು ನಂತರ ಇಂಧನ ಇಲಾಖೆಯ ಹೊಣೆಗಾರಿಕೆಯನ್ನು ವಹಿಸಿ ಕೊಳ್ಳುತ್ತೇವೆ. ಈ ಅಧಿಕಾರ ಸ್ವೀಕರಿಸಿದ ಬಳಿಕ ನನ್ನ ಚಟುವಟಿಕೆಗಳನ್ನು ಆರಂಭಿ ಸುತ್ತೇನೆ ಎಂದರು.
ಎಂಟಿಬಿ ಹಾಗೂ ಆನಂದ ಸಿಂಗ್ ಅವರ ಬೇಡಿಕೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಚಿವ ಸ್ಥಾನಕ್ಕೆ ಸಂಬಂಧಿಸಿ ಬೇಸರ ಇರುವವರನ್ನು ಕರೆದು ಸರಿ ಮಾಡುವುದಾಗಿ ಈಗಾಗಲೇ ಸಿಎಂ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯಲ್ಲಿ ಆಂತರಿಕವಾದ ವ್ಯವಸ್ಥೆ ಇದ್ದು, ಬೇಸರ, ನೋವು ಆದವರನ್ನು ಆಂತರಿಕವಾಗಿ ಕರೆದು ಮಾತುಕತೆ ನಡೆಸುವ ವ್ಯವಸ್ಥೆ ನಮ್ಮ ಪಕ್ಷದಲ್ಲಿ ಇದೆ. ಆ ರೀತಿ ಶಾಸಕರು, ಮಂತ್ರಿಗಳ ಮನಸ್ಸಿಗೆ ನೋವಾಗಿದ್ದರೆ ನಮ್ಮ ವ್ಯವಸ್ಥೆಯಲ್ಲಿ ನಾವು ಸರಿಪಡಿಸು ತ್ತೇವೆ. ಯೋಗೀಶ್ವರ್ ದೆಹಲಿ ಹೋಗಿರುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
ಬೊಮ್ಮಾಯಿ-ದೇವೇಗೌಡರ ಭೇಟಿ ಬಗ್ಗೆ ಪ್ರೀತಂ ಗೌಡ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗೆಳೆತನ ಯಾರ ಜೊತೆಯಲ್ಲೂ ಇರಬಹುದು. ಆದರೆ ನಮ್ಮ ಬದ್ಧತೆ ಹಾಗೂ ಕಾರ್ಯಶೈಲಿಯಲ್ಲಿ ಯಾವುದೇ ವ್ಯಾತ್ಯಾಸ ಆಗಬಾರದು ಎಂದರು. ಝಮೀರ್ ಅಹ್ಮದ್ ಮನೆಯ ಮೇಲಿನ ದಾಳಿಯ ಕುರಿತ ಅವರೇ ಬಹಿರಂಗವಾಗಿ ಬೇರೆಯವರ ಮೇಲೆ ಆರೋಪ ಮಾಡುತ್ತಾರೆ. ಆದರೆ ಆಂತರಿಕ ವಾಗಿ ಅವರ ಪಕ್ಷದ ನಾಯಕರೇ ಈ ದಾಳಿ ಮಾಡಿಸಿರುವುದು ಹೇಳುತ್ತಾರೆ. ಹಾಗಾಗಿ ಇದು ಅವರವರ ಆಂತರಿಕ ಬೇಗುದಿ ಬಿಟ್ಟರೆ ಇದರಲ್ಲಿ ನಮ್ಮದು ಏನು ಪಾತ್ರ ಇಲ್ಲ ಎಂದು ಅವರು ಹೇಳಿದರು.
ಡಿಕೆಶಿ ಅವಧಿ ಆಗಿರುವ ಹಗರಣಗಳು ಬಹಿರಂಗವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾನು ಹಗರಣಗಳನ್ನು ಹೊರ ತೆಗೆಯಲು ಬಂದಿರುವ ಸಚಿವ ಅಲ್ಲ. ನಾನು ಕರ್ನಾಟಕದಲ್ಲಿ ಸುಧಾರಣೆಗಳನ್ನು ತರಲು ಬಂದಿರುವ ಸಚಿವ. ಹಾಗಾಗಿ ನಮಗೆ ಇರುವ ಸೀಮಿತ ಅವಧಿಯಲ್ಲಿ ಸುಧಾರಣೆಗಳನ್ನು ತರುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ತಾಯಿ ಮಕ್ಕಳ ಆಸ್ಪತ್ರೆ ಬಗ್ಗೆ ಸಿಎಂ ಜೊತೆ ಸಭೆ
ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರದ ಸುಪರ್ದಿಗೆ ತೆಗೆದು ಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಆರೋಗ್ಯ ಸಚಿವರು ಹಾಗೂ ಇಲಾಖೆ ಅಧಿಕಾರಿಗಳ ಸಭೆ ಕರೆದು ಪರಿಹಾರ ಕಂಡುಕೊಳ್ಳಲಾಗುವುದು. ಆ.12ರೊಳಗೆ ಈ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.
ಆದುದರಿಂದ ಆ.11ರಿಂದ ಆಸ್ಪತ್ರೆಯ ಸಿಬ್ಬಂದಿಗಳು ನಡೆಸಲು ಉದ್ದೇಶಿಸಿ ರುವ ಪ್ರತಿಭಟನೆಯನ್ನು ಕೈಬಿಟ್ಟು ನಮ್ಮ ಜೊತೆ ಸಹಕರಿಸಬೇಕು. ಹೊಸ ಮುಖ್ಯಮಂತ್ರಿ ಆಯ್ಕೆಯಾಗಿರುವುದರಿಂದ ಇದೀಗ ಮಂತ್ರಿಮಂಡಲ ರಚನೆ ಯಾಗಿದೆ. ಸರಕಾರ ಮತ್ತು ಜನಪ್ರತಿನಿಧಿಗಳ ಮೇಲೆ ಭರವಸೆಯನ್ನು ಇಟ್ಟು ಕೊಂಡು ಪ್ರತಿಭಟನೆಯನ್ನು ಕೈಬಿಡಬೇಕು. ಸಿಬ್ಬಂದಿ, ಆಸ್ಪತ್ರೆ ಹಾಗೂ ಜಿಲ್ಲೆಯ ಹಿತಾಸಕ್ತಿ ಕಾಪಾಡಲು ನಾವು ಬದ್ಧರಾಗಿದ್ದೇವೆ. ಗುರುವಾರ ಸಭೆ ನಡೆಸಿದ ಬಳಿಕ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಅವರು ಭರವಸೆ ನೀಡಿದರು.