ಯಕ್ಷ ಕಲಾವಿದ ನಾರಾಯಣ ದೇವಾಡಿಗ ನಿಧನ

Update: 2021-08-15 14:17 GMT

ಕುಂದಾಪುರ, ಆ.15: ಹಿರಿಯ ಯಕ್ಷಗಾನ ಕಲಾವಿದರಾದ ಚಿತ್ತೂರು ನಾರಾಯಣ ದೇವಾಡಿಗ (70) ರವಿವಾರ ಬೈಂದೂರಿನ ಪುತ್ರಿಯ ಮನೆಯಲ್ಲಿ ನಿಧನರಾದರು.

ಕುಂದಾಪುರ ತಾಲೂಕಿನ ಹಳ್ನಾಡಿನ ನಾರಾಯಣ ದೇವಾಡಿಗರು ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿ, ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ವೀರಭದ್ರ ನಾಯಕ, ನೀಲಾವರ ರಾಮಕೃಷ್ಣಯ್ಯ, ಹಿರಿಯಡ್ಕ ಗೋಪಾಲ ರಾಯರ ಗರಡಿಯಲ್ಲಿ ಪಳಗಿ ಸ್ತ್ರೀವೇಷಧಾರಿಯಾಗಿ ಮೇಳ ಸೇರಿದರು.

ಕಮಲಶಿಲೆ, ಸಾಲಿಗ್ರಾಮ, ಹಳವಾಡಿ, ಗೋಳಿಗರಡಿ, ಮಾರಣಕಟ್ಟೆ, ಸೌಕೂರು, ಮಡಾಮಕ್ಕಿ, ಪೆರ್ಡೂರು ಹಾಗು ಹಾಲಾಡಿ ಮೇಳಗಳಲ್ಲಿ ಸುದೀರ್ಘ ಐದು ದಶಕಗಳ ಕಲಾಸೇವೆ ಗೈದಿರುವ ಇವರು ಕಳೆದೆರಡು ವರ್ಷ ಗಳಿಂದ ಅಸೌಖ್ಯದಿಂದಾಗಿ ಮನೆಯಲ್ಲಿದ್ದರು. ಇವರು ಕೆಲ ವರ್ಷ ಮಂದಾರ್ತಿ ವೆುೀಳದಲ್ಲೂ ಕಲಾಸೇವೆ ಮಾಡಿದ್ದರು.

ಅಂಬೆ, ಮೀನಾಕ್ಷಿ, ದ್ರೌಪದಿ, ದಮಯಂತಿ, ಚಿತ್ರಾಂಗದೆ ಮೊದಲಾದ ಪೌರಾಣಿಕ ಸ್ತ್ರೀಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿದ್ದ ದೇವಾಡಿಗರು ಕೃಷ್ಣ, ಭೀಷ್ಮ, ರಾಮ, ರಾವಣ, ಈಶ್ವರ, ಅರ್ಜುನ ಮೊದಲಾದ ಪುರುಷ ಪಾತ್ರಗಳನ್ನು ಸಹ ಅಷೆ್ಟೀ ಸಮರ್ಥವಾಗಿ ನಿರ್ವಹಿಸುತಿದ್ದರು. ಇವರ ಕಲಾಸಾಧನೆಗೆ ದ್ಯೋತಕವಾಗಿ ಹಲವು ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ನಾಲ್ಕು ವರ್ಷಗಳ ಹಿಂದೆ ಉಡುಪಿಯ ಯಕ್ಷಗಾನ ಕಲಾರಂಗವು ಶಿರಿಯಾರ ಮಂಜು ನಾಯ್ಕ ನೆನಪಿನಲ್ಲಿ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು.

ಇವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News