ಕೊರೋನ ಸಮಯದಲ್ಲಿಯೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಸಂಸ್ಥೆಯಲ್ಲಿ ಉದ್ಯೋಗ: ಸತೀಶ್ ಶೆಟ್ಟಿ
ಬಂಟ್ವಾಳ, ಆ.27: ಕೊರೋನ ಸಂಕಷ್ಟ ಕಾಲದಲ್ಲೂ ಜನರ ಜೀವನ ನಿರ್ವಹಣೆಯ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಸಂಸ್ಥೆಯಲ್ಲಿ ಉದ್ಯೋಗ ಕಲ್ಪಿಸಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಶ್ರೀ. ಕ್ಷೇ.ಗ್ರಾ. ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದ್ದಾರೆ.
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಘಟಕದ ಸಹಯೋಗದಲ್ಲಿ ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಿಂದ ಆರಂಭಗೊಂಡ ರಿಯಾಯಿತಿ ದರದ ಸಿದ್ದ ಉಡುಪುಗಳ ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸಿರಿ ಸಂಸ್ಥೆಯು ರಾಜ್ಯಾದ್ಯಂತ ಉತ್ಪಾದನಾ ಘಟಕಗಳು ಕಾರ್ಯಾರಿಸುತ್ತಿದ್ದು, ಬಂಟ್ವಾಳ ತಾಲೂಕಿನ ನಾವೂರು, ನೈನಾಡಿನಲ್ಲಿಯು ಅಗರಬತ್ತಿ ಉತ್ಪಾದನಾ ಘಟಕಗಳ ಕಾರ್ಯನಿರ್ವಹಿಸುತ್ತಿವೆ ಎಂದ ಅವರು, ಸಿರಿ ಸಂಸ್ಥೆಯಲ್ಲಿ ತಯಾರಿಸಲಾದ ಸಿದ್ಧ ಉಡುಪುಗಳ ಸಹಿತ ವಿವಿಧ ಉತ್ಪಾದನೆಗಳನ್ನು ಶೇ.30ರ ದರವನ್ನು ನಿಗದಿಗೊಳಿಸಿ ಮಾರಾಟ ಮಾಡಲಾಗುತ್ತಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಜಿಲ್ಲಾ ಯೋನಾಧಿಕಾರಿ ಮಹಾಂತೇಶ್, ಸಿರಿ ಮಾರ್ಕೆಟಿಂಗ್ ಮ್ಯಾನೇಜರ್ ಸುಧಾಕರ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದ ಪ್ರಬಂಧಕ ವಿಶಾಲ್ ಹೆಗ್ಡೆ, ಯೋಜನೆಯ ಬಿ.ಸಿ.ರೋಡ್ ವಲಯಾಧ್ಯಕ್ಷ ಶೇಖರ ಸಾಮಾನಿ, ಸ್ಥಳೀಯ ಒಕ್ಕೂಟದ ಅಧ್ಯಕ್ಷ ರಾಜೇಶ್, ರಘುನಾಥ್ ಉಪಸ್ಥಿತರಿದ್ದರು.
ಮೇಲ್ವಿಚಾರಕ ಕೇಶವ ಸ್ವಾಗತಿಸಿದರು. ಸಿರಿ ಸಂಸ್ಥೆಯ ಮೇಲ್ವಿಚಾರಕ ಸಂದೇಶ್ ವಂದಿಸಿದರು. ಮೇಲ್ವಿಚಾರಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಸೆ.7ರವರೆಗೆ ಮಾರಾಟ ಮೇಳ ನಡೆಯಲಿದೆ.