ಮಕ್ಕಳಲ್ಲಿ ಕಂಡು ಬಂದ ಜೋಡಿ ಅನ್ನನಾಳದ ಅಪರೂಪದ ಶಸ್ತ್ರಚಿಕಿತ್ಸೆ: ಕೆಎಂಸಿ ಮಣಿಪಾಲ ವೈದ್ಯರ ಸಾಧನೆ

Update: 2021-08-27 13:11 GMT

ಉಡುಪಿ, ಆ.27: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗವು ಇಬ್ಬರು ಮಕ್ಕಳಲ್ಲಿ ಕಂಡುಬಂದಿದ್ದ ಸಂಕೀರ್ಣ ಮತ್ತು ಅಪರೂಪದ ಜೋಡಿ ಅನ್ನನಾಳದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.

ಮನುಷ್ಯನಲ್ಲಿ ಎರಡು ಅನ್ನನಾಳ ಕಂಡುಬರುವುದು ಅತ್ಯಂತ ಅಪರೂಪದ ಜನ್ಮಜಾತ ಭ್ರೂಣದ ವಿರೂಪಗಳು. ಅದರಲ್ಲೂ ಕೊಳವೆಯಾಕಾರದ ಭಾಗದ ಈ ಜೋಡಿ ಅನ್ನನಾಳಗಳು ತೀರ ಅಪರೂಪವಾಗಿದೆ. ಹುಟ್ಟಿನಿಂದಲೇ ಇವು ಇದ್ದರೂ, ಬಾಲ್ಯದಲ್ಲಿ ರೋಗಲಕ್ಷಣಗಳು ವಿರಳವಾಗಿ ಕಂಡುಬರುತ್ತವೆ. ಆದರೆ ವಯಸ್ಕರಲ್ಲಿ ಹೆಚ್ಚು ಗುಣಲಕ್ಷಣಗಳು ಕಂಡುಬರುತ್ತವೆ. ಅವರಿಗೆ ನುಂಗಲು ಕಷ್ಟವಾಗಬಹುದು, ಉಸಿರಾಟದ ತೊಂದರೆ, ಎದೆನೋವು, ಎಪಿಗ್ಯಾಸ್ಟ್ರಿಕ್ ಅಸ್ವಸ್ಥತೆ, ವಾಂತಿ, ಸ್ಟ್ರಿಡರ್, ಕೆಮ್ಮು, ರಕ್ತಸ್ರಾವ, ಮತ್ತು ಹೆಮೆಟಮೆಸಿಸ್ ಅಥವಾ ಪ್ರಾಸಂಗಿಕವಾದ ತೊಂದರೆಗಳು ಕಾಣಿಸಿಕೊಳ್ಳಬಹುದು. ಇಂಥವರಲ್ಲಿ ವಿಭಿನ್ನ ಪ್ರಸ್ತುತಿಗಳಿಂದಾಗಿ, ರೋಗನಿರ್ಣಯವು ಸಾಮಾನ್ಯಾಗಿ ಕಷ್ಟ ಅಥವಾ ವಿಳಂಬವಾಗುತ್ತದೆ.

ಮಣಿಪಾಲ ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಇತ್ತೀಚೆಗೆ ಇಂತಹ ಜೋಡಿ ಅನ್ನನಾಳ ಇರುವ 2 ಪ್ರಕರಣಗಳು ಕಂಡುಬಂದವು. ಒಂದು 11 ತಿಂಗಳ ಮಗು, ಮತ್ತು ಇನ್ನೊಂದು 11 ವರ್ಷದ ಹುಡುಗಿ. 11 ತಿಂಗಳ ಮಗುವಿಗೆ ಮರು ಕಳಿಸುವ ಉಸಿರಾಟದ ಸೋಂಕುಗಳು ಮತ್ತು ಉಸಿರಾಟದ ತೊಂದರೆ ಕಾಣಿಸಿ ಕೊಳ್ಳುತ್ತಿತ್ತು. 11 ವರ್ಷದ ಮಗುವಿಗೆ ಇತ್ತೀಚೆಗೆ ಧ್ವನಿಯ ಬದಲಾವಣೆ, ಮಲಗಿರುವ ಸ್ಥಿತಿಯಲ್ಲಿ ಉಸಿರಾಟದ ತೊಂದರೆ ಮತ್ತು ಕುತ್ತಿಗೆಯಲ್ಲಿ ಊತದಂತಹ ಲಕ್ಷಣ ಕಂಡುಬಂದಿತ್ತು.

ರೋಗಿಗಳನ್ನು ಎಕ್ಸ್-ರೇ, ಸಿಟಿಸ್ಕ್ಯಾನ್ ಮತ್ತು ಎಂಡೋಸ್ಕೋಪಿಕ್ ಮೂಲಕ ಮೌಲ್ಯಮಾಪನ ಮಾಡಲಾಯಿತು. ಸಂಪೂರ್ಣ ಮೌಲ್ಯಮಾಪನದ ನಂತರವೂ, 11 ವರ್ಷದ ಮಗುವಿನಲ್ಲಿ ಜೋಡಿ ಅನ್ನನಾಳ ವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಜೋಡಿ ಅನ್ನನಾಳವನ್ನು ಕಂಡು ಆಶ್ಚರ್ಯವಾಯಿತು.

ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾದ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ವಿಜಯಕುಮಾರ್ ಮತ್ತವರ ತಂಡದ ಡಾ.ಸಂತೋಷ್ ಪ್ರಭು, ಡಾ.ಸಂದೀಪ್ ಪಿ.ಟಿ, ಡಾ.ಹರ್ಷ ಆಚಾರ್ಯ ಮತ್ತು ಡಾ.ರಂಜನಿಯವರ ತಂಡ, ಕುತ್ತಿಗೆ ಮತ್ತು ಎದೆಯ ಭಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಹೆಚ್ಚುವರಿ ಅನ್ನನಾಳವನ್ನು ತೆಗೆದು ಹಾಕಿದರು. ಹೃದಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಅರವಿಂದ ಬಿಷ್ಣೋಯಿ, ಒಬ್ಬ ರೋಗಿಗೆ ಇಂಟ್ರಾ ಆಪರೇಟಿವ್ ಆಗಿ ಸಹಾಯ ಮಾಡಿದರು. ಮಕ್ಕಳ ಅರಿವಳಿಕೆ ತಜ್ಞ ಡಾ.ಅಜಿತ್ ಅರಿವಳಿಕೆ ನೀಡಿದ್ದರು. ಶಸ್ತ್ರಚಿಕಿತ್ಸೆಯ ನಂತರ ಇದೀಗ ಇಬ್ಬರೂ ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಇಂತಹ ವೈಪರೀತ್ಯಗಳು ಮಕ್ಕಳಲ್ಲಿ ಅತ್ಯಂತ ಅಪರೂಪದ ಸಮಸ್ಯೆ. ಇದು ಬೇರೆ ಬೇರೆ ವಯಸ್ಸಿನವರಲ್ಲಿ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಬಹುದು. ಸಂಪೂರ್ಣ ಪರೀಕ್ಷೆಯ ಬಳಿಕವೂ ಕೆಲವು ಸಂದರ್ಭಗಳಲ್ಲಿ ರೋಗನಿರ್ಣಯ ಕಷ್ಟವಾಗಬಹುದು. ಆದ್ದರಿಂದ ರೋಗನಿರ್ಣಯದಲ್ಲಿ ಉನ್ನತ ಮಟ್ಟದ ತಪಾಸಣೆ ಮುಖ್ಯವಾಗಿದೆ. ಸರಿಯಾದ ಸಮಯದಲ್ಲಿ ಶಸ್ತ್ರ ಚಿಕಿತ್ಸೆ ನಡೆಸದಿದ್ದರೆ, ಇದು ವಿವಿಧ ತೊಡಕುಗಳಿಗೆ ಕಾರಣವಾಗಿ ಬೇರೆ ರೀತಿಯ ತೊಂದರೆಗಳು ಕಾಣಿಸಬಹುದು. ಆದ್ದರಿಂದ ಸಕಾಲದಲ್ಲಿ ರೋಗ ಪತ್ತೆ, ಪ್ರಮುಖ ಶಸ್ತ್ರಚಿಕಿತ್ಸೆಗೆ ಮುನ್ನ ಸರಿಯಾದ ಅಂಗರಚನಾಶಾಸ್ತ್ರದ ತಿಳುವಳಿಕೆ ಮತ್ತು ತಜ್ಞರ ತಂಡ ದಲ್ಲಿ ಉತ್ತಮ ಹೊಂದಾಣಿಕೆ ಮಕ್ಕಳಲ್ಲಿ ಕಂಡುಬರುವ ಅತ್ಯಂತ ಅಪರೂಪದ ಇಂಥ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಮುಖ್ಯವಾಗಿದೆ ಎಂದು ಡಾ.ವಿಜಯ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News