ಯಕ್ಷಗಾನ ಕಲಾವಿದರಿಗೆ ಈ ಬಾರಿಯೂ ಗೌರವಧನಕ್ಕೆ ಚಿಂತನೆ : ಸಚಿವ ಸುನೀಲ್ ಕುಮಾರ್

Update: 2021-08-30 14:07 GMT

ಕುಂದಾಪುರ, ಆ.30: ಕಳೆದ ಬಾರಿ ಕೋವಿಡ್ ಸಂದರ್ಭದಲ್ಲಿ 20 ಸಾವಿರ ಮಂದಿ ಯಕ್ಷಗಾನ ಕಲಾವಿದರಿಗೆ ಸರಕಾರ ಗೌರವಧನ ನೀಡಿತ್ತು. ಈ ಬಾರಿ ಸಹ ಅದೇ ರೀತಿ ಗೌರವಧನ ನೀಡುವ ಸರಕಾರದ ಮುಂದಿದ್ದು, ಬೆಂಗಳೂರಿಗೆ ತೆರಳಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಸೋಮವಾರ ತಾಲೂಕಿನ ಹಟ್ಟಿಯಂಗಡಿ ಶ್ರೀಸಿದ್ದಿ ವಿನಾಯಕ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರ ರೊಂದಿಗೆ ಮಾತನಾಡುತಿದ್ದರು. ಯಕ್ಷಗಾನ ಮಾತ್ರವಲ್ಲದೇ ಎಲ್ಲಾ ಅಕಾಡೆಮಿ ಗಳಿಗೂ ಹೊಸತನ ತರುವ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗಣೇಶ ಚತುರ್ಥಿಯಂಥ ಧಾರ್ಮಿಕ ಆಚರಣೆಯನ್ನು ನಡೆಸುವ ಬಗ್ಗೆ ಸರಕಾರಕ್ಕೆ ಭಿನ್ನಾಭಿಪ್ರಾಯವಿಲ್ಲ. ಆದರೆ ಆಚರಣೆ ಜೊತೆಗೆ ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ಸರಕಾರದ ಮೇಲಿದೆ. ಈ ನಿಟ್ಟಿನಲ್ಲಿ ತಜ್ಞರ ಅಭಿಪ್ರಾಯ ನೋಡಿಕೊಂಡು, ಕೇಂದ್ರ ಸರಕಾರದ ಸೂಚನೆಗಳನ್ನು ಅನುಸರಿಸಿ ಆಚರಣೆಗಳ ಬಗ್ಗೆ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜ್ಯ ಪ್ರವಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿ.ಎಸ್.ಯಡಿಯೂರಪ್ಪ ರಾಜ್ಯದ ಸರ್ವ ಶ್ರೇಷ್ಠ ನಾಯಕರು. ಅವರು ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡುವುದು ಸ್ವಾಗತಾರ್ಹ. ಪಕ್ಷ ಸಂಘಟನೆಯನ್ನು ಯಾರು ಬೇಕಾದರೂ ಮಾಡಬಹುದು. ಸರಕಾರಕ್ಕೆ ಮತ್ತು ಪಕ್ಷಕ್ಕೆ ಅವರ ಸಲಹೆ ಅತ್ಯಗತ್ಯ ಎಂದರು.

ಸಚಿವರು ಪತ್ನಿ ಹಾಗೂ ಪುತ್ರಿಯರೊಂದಿಗೆ ಸಿದ್ಧಿವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಚಿವರನ್ನು ಹಟ್ಟಿಯಂಗಡಿ ದೇವಸ್ಥಾನದ ಧರ್ಮದರ್ಶಿ ಬಾಲ ಚಂದ್ರ ಭಟ್ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಕರಣ ಪೂಜಾರಿ, ಹಟ್ಟಿಯಂಗಡಿ ಗ್ರಾಪಂ ಅಧ್ಯಕ್ಷೆ ಅಮೃತಾ ಶೆಟ್ಟಿ, ಸದಸ್ಯ ಚಂದ್ರ ಮೊಗವೀರ, ಪಕ್ಷ ನಾಯಕರಾದ ಪ್ರಭಾಕರ ಶೆಟ್ಟಿ, ಗುರುರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News