ಪುತ್ತೂರು; ಯುವಕನಿಗೆ ಹಲ್ಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2021-09-03 06:29 GMT

ಪುತ್ತೂರು:  ಯುವತಿಯೋರ್ವಳನ್ನು ಭೇಟಿಯಾಗಲೆಂದು ರಾಯಚೂರಿನಿಂದ ಬಂದ ಯುವಕನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಪುತ್ತೂರು ನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ ಅಬ್ದುಲ್ ಮಜೀದ್ (21), ಸುಳ್ಯ ತಾಲೂಕಿನ ಪಂಜ ಎಣ್ಮೂರು ನಿವಾಸಿ ಫಾರೂಕ್ (32) ಮತ್ತು ಅಲೇಬಿ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ದದ್ದಲ ಗ್ರಾಮದ ನಿವಾಸಿ ಹನುಮಂತಯ್ಯ (19) ಎಂಬ ಯುವಕನಿಗೆ ಸಾಮಾಜಿಕ ಜಾಲತಾಣ ಮೂಲಕ ಪುತ್ತೂರಿನ ಯುವತಿಯ ಪರಿಚಯವಾಗಿತ್ತು. ಅವರು ಮೆಸೇಜ್ ಮತ್ತು ಮೊಬೈಲ್‌ನಲ್ಲಿ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ಯುವತಿಯನ್ನು ಭೇಟಿಯಾಗಲೆಂದು ಪುತ್ತೂರಿಗೆ ತನ್ನ ಸ್ನೇಹಿತ ಚೌಡಯ್ಯ ಎಂಬ ಯುವಕನೊಂದಿಗೆ ಆಗಮಿಸಿದ್ದು, ಯುವತಿ ಅದೇ ಸಮಯದಲ್ಲಿ ತನ್ನ ಸ್ನೇಹಿತೆಯೊಂದಿಗೆ ಪುತ್ತೂರು ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣಕ್ಕೆ ಆಗಮಿಸಿದ್ದರು. ಅವರು ಬಸ್ಸು ನಿಲ್ದಾಣದಲ್ಲಿ ಮಾತುಕತೆ ನಡೆಸುತ್ತಿದ್ದ ವೇಳೆಯಲ್ಲಿ ನಾಲ್ಕೈದು ಮಂದಿ ಯುವಕರು ನನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಹನುಮಂತಯ್ಯ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News