ಮಂಗಳೂರು, ಖಾಸಗಿ ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಪ್ರತಿಭಟನೆ

Update: 2021-09-03 11:30 GMT

ಮಂಗಳೂರು, ಸೆ.3: ಖಾಸಗಿ ಬಸ್ ಪ್ರಯಾಣ ದರ ಏರಿಕೆಯ ವಿರುದ್ಧ ಹಾಗೂ ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ ಸಿಪಿಎಂ ನೇತ್ರತ್ವದಲ್ಲಿ ಯೆಯ್ಯಡಿ ಜಂಕ್ಷನ್ ನಲ್ಲಿ ಪ್ರತಿಭಟನಾ ಪ್ರದರ್ಶನ ಇಂದು ನಡೆಯಿತು.

ಖಾಸಗಿ ಬಸ್ ಪ್ರಯಾಣ ದರವನ್ನು ವಿಪರೀತವಾಗಿ ಏರಿಸುವ ಮೂಲಕ ದ.ಕ.ಜಿಲ್ಲಾಡಳಿತ ಸಂಪೂರ್ಣವಾಗಿ ಬಸ್ ಮಾಲಕರ ಲಾಬಿಗೆ ಶರಣಾಗಿದೆ. ಬೆರಳೆಣಿಕೆಯಷ್ಟು ಇರುವ ಬಸ್ ಮಾಲಕರ ಸಂಕಷ್ಟದ ಬಗ್ಗೆ ಭಾರೀ ಕಾಳಜಿ ವ್ಯಕ್ತಪಡಿಸುವ ಜಿಲ್ಲಾಧಿಕಾರಿಗಳು,ಜಿಲ್ಲೆಯ ಲಕ್ಷಾಂತರ ಜನತೆಯ ಸಂಕಷ್ಟವನ್ನು ಅರಿಯಲು ವಿಫಲರಾಗಿದ್ದಾರೆ ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನಾ ಸಂಕಷ್ಟದ ಕಾಲಘಟ್ಟದಲ್ಲಿ ಜನರ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು, ಸಾರಿಗೆ ಪ್ರಾಧಿಕಾರದ ಸಭೆ ಕರೆದು ನ್ಯಾಯಯುತ ವಾಗಿ ಪ್ರಯಾಣ ದರವನ್ನು ಪರಿಷ್ಕರಿಸಬೇಕಾಗಿದ್ದ ಜಿಲ್ಲಾಧಿಕಾರಿಗಳು ಏಕಪಕ್ಷೀಯ ನಿರ್ಧಾರ ಕೈಗೊಂಡು ಜಿಲ್ಲೆಯ ಜನತೆಗೆ ಮೋಸವೆಸಗಿದ್ದಾರೆ ಎಂದವರು ಹೇಳಿದರು. ಸಿಐಟಿಯು ಜಿಲ್ಲಾ ನಾಯಕರಾದ ರವಿಚಂದ್ರ ಕೊಂಚಾಡಿ, ಡಿವೈಎಫ್‌ಐ ಮಂಗಳೂರು ನಗರಾಧ್ಯಕ್ಷರಾದ ನವೀನ್ ಕೊಂಚಾಡಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿ, ದಲಿತ ಹಕ್ಕುಗಳ ಸಮಿತಿಯ ನಾಯಕರಾದ ತಿಮ್ಮಯ್ಯ ಕೊಂಚಾಡಿ, ಸ್ಥಳೀಯ ಸಿಪಿಎಂ ಮುಖಂಡರಾದ ದಯಾನಂದ ಕೊಪ್ಪಳಕಾಡು, ದಯಾನಂದ ಶೆಟ್ಟಿಗಾರ್, ಪದ್ಮನಾಭ ಕೊಂಚಾಡಿ, ನಾರಾಯಣ,ಪ್ರವೀಣ್, ಪಾಂಡುರಂಗ ಮುಂತಾದವರು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News