ಕೆರೆಗೆ ಬಿದ್ದು ಯುವಕ ಮೃತ್ಯು
Update: 2021-09-06 17:48 GMT
ಉಳ್ಳಾಲ: ಕೇರಳ ಮೂಲದ ಕೂಲಿಕಾರ್ಮಿಕರೊಬ್ಬರು ಕೆರೆಯಲ್ಲಿ ಕೈಕಾಲು ತೊಳೆಯುತ್ತಿದ್ದ ಸಂದರ್ಭ ನೀರಿಗೆ ಬಿದ್ದು ಮೃತಪಟ್ಟ ಘಟನೆ ಅಜ್ಜಿನಡ್ಕ ಎಂಬಲ್ಲಿ ಸೋಮವಾರ ನಡೆದಿದೆ.
ಮೃತರನ್ನು ಮಂಜೇಶ್ವರ ಸಮೀಪದ ತುಮಿನಾಡು ನಿವಾಸಿ ಇಬ್ರಾಹಿಂ (30) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಅಜ್ಜಿನಡ್ಕ ನಿವಾಸಿ ಅಹ್ಮದ್ ಅವರ ಮನೆಯ ಅಡಿಪಾಯ ಕೆಲಸಕ್ಕೆಂದು ಇಬ್ರಾಹಿಂ ಸಹಿತ ಮೂವರು ಬಂದಿದ್ದು, ಎರಡು ದಿನಗಳ ಹಿಂದೆ ಕೆಲಸ ಆರಂಭಿಸಿದ್ದರು ಎನ್ನಲಾಗಿದೆ. ಸೋಮವಾರ ಎಂದಿನಂತೆ ಕೆಲಸಕ್ಕೆ ಬಂದ ಇಬ್ರಾಹಿಂ ಅವರು ಕೆಲಸ ಮುಗಿದ ಬಳಿಕ ಕೈಕಾಲು ತೊಳೆಯಲೆಂದು ಆವರಣ ಇಲ್ಲದ ಕೆರೆಗೆ ಹೋಗಿದ್ದರು. ಈ ವೇಳೆ ಆಕಸ್ಮಾತ್ ನೀರಿಗೆ ಬಿದ್ದಿದ್ದಾರೆ. ಅವರ ರಕ್ಷಣೆಗೆ ಪ್ರಯತ್ನ ನಡೆದಿದ್ದರೂ ಕೂಡಾ ಆ ವೇಳೆಗೆ ಅವರು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.