ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ; ಪ್ರಮುಖ ಆರೋಪಿ ವಕೀಲ ರಾಜೇಶ್ ಶೀಘ್ರ ಬಂಧನ: ಕಮಿಷನರ್ ಶಶಿಕುಮಾರ್

Update: 2021-11-02 14:53 GMT
ಕೆ.ಎಸ್.ಎನ್. ರಾಜೇಶ್

ಮಂಗಳೂರು, ನ. 2: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಪ್ರಮುಖ ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ತಲೆಮರೆಸಿಕೊಂಡಿದ್ದು, ಶೀಘ್ರ ಆತನನ್ನು ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಆರೋಪಿ ರಾಜೇಶ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಆತನಿಗೆ ತೀವ್ರ ಶೋಧ ಮುಂದುವರಿಸಿದ್ದಾರೆ ಎಂದರು.

ವಾಸ್ತವ್ಯ ಬದಲಾವಣೆ: ಆರೋಪಿ ಬಂಧನಕ್ಕೆ 4 ತಂಡಗಳನ್ನು ರಚನೆ ಮಾಡಲಾಗಿದೆ. ಬಂಧನ ಭೀತಿಯಿಂದ ಪದೇ ಪದೇ ವಾಸ್ತವ್ಯವನ್ನು ಬದಲಾಯಿಸುತ್ತಿದ್ದಾನೆ. ಆದರೂ ಕೆಲವೊಂದು ಸೂಕ್ಷ್ಮ ಮಾಹಿತಿ ಲಭಿಸಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು. ಈ ಪ್ರಕರಣದ ತನಿಖಾ ಹೊಣೆಯನ್ನು ಮಂಗಳೂರು ದಕ್ಷಿಣ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಬಂಡಾರು ಅವರಿಗೆ ವಹಿಸಲಾಗಿದ್ದು, ಈಗಾಗಲೇ 4 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News