ಯುವತಿಗೆ ತಮಾಷೆ ಮಾಡಿದ ಆರೋಪ; ಎರಡು ತಂಡಗಳ ನಡುವೆ ಹೊಡೆದಾಟ: ಯುವಕನಿಗೆ ಗಾಯ
Update: 2021-11-03 15:49 GMT
ಮಂಗಳೂರು, ನ.3: ಯುವತಿಗೆ ತಮಾಷೆ ಮಾಡಿದ್ದರೆಂಬ ಆರೋಪದಲ್ಲಿ ನಗರದ ಕದ್ರಿ ಬಟ್ಟಗುಡ್ಡೆ ಬಳಿ ಯುವಕರ ತಂಡ ಹೊಡೆದಾಡಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ.
ರೆಸ್ಟೋರೆಂಟ್ವೊಂದಕ್ಕೆ ಯುವತಿ ಮತ್ತು ಯುವಕ ಬಂದಿದ್ದರು. ಈ ಸಂದರ್ಭ ಅಲ್ಲಿದ್ದ ಯುವಕರ ತಂಡ ತಮಾಷೆ ಮಾಡಿದ್ದರೆಂಬ ನೆಪದಲ್ಲಿ ಯುವತಿ ಜೊತೆಗಿದ್ದಾತ ತಗಾದೆ ತೆಗೆದಿದ್ದಾನೆ. ಈ ಸಂದರ್ಭ ಮಾತಿಗೆ ಮಾತು ಬೆಳೆದಿದೆ. ಕೂಡಲೇ ಯುವತಿ ಜೊತೆಗಿದ್ದ ಯುವಕ ಮತ್ತಷ್ಟು ಗೆಳೆಯರನ್ನು ಕರೆದಿದ್ದು, ಇದರಿಂದ ಯುವಕರು ಜಮಾಯಿಸಿ ಹೊಡೆದಾಡಿಕೊಂಡಿದ್ದಾರೆ. ಕಲ್ಲಿನಿಂದ ಹಲ್ಲೆ ನಡೆಸಿದ ಕಾರಣ ಯುವಕನೊಬ್ಬನ ಹಣೆಗೆ ಗಾಯವಾಗಿದೆ.
ಕದ್ರಿ ಪೊಲೀಸರಿಗೆ ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ್ದು, ಪೊಲೀಸರನ್ನು ನೋಡಿ ಯುವಕರ ಒಂದು ತಂಡ ಸ್ಥಳದಿಂದ ಪರಾರಿಯಾಗಿದೆ. ಬಳಿಕ ಪೊಲೀಸರು ಯುವತಿಯನ್ನು ವಿಚಾರಿಸಿ ಕಳುಹಿಸಿಕೊಟ್ಟಿದ್ದಾರೆ.