ಕೋಟ; ಪಟಾಕಿ ಕಿಡಿ ತಗುಲಿ ಕಲ್ಲುಕೊರೆಗೆ ಬಳಸುವ ರಾಸಾಯನಿಕ ವಸ್ತು ಸ್ಫೋಟ: ದಂಪತಿಗೆ ಗಾಯ
Update: 2021-11-06 16:23 GMT
ಕೋಟ, ನ.6: ಪಟಾಕಿ ಕಿಡಿ ತಗುಲಿದ ಪರಿಣಾಮ ಮನೆಯಲ್ಲಿ ಇರಿಸಿದ್ದ ಕಲ್ಲುಕೊರೆಗೆ ಬಳಸುವ ರಾಸಾಯನಿಕ ವಸ್ತು ಸಿಡಿದು ದಂಪತಿ ಗಾಯಗೊಂಡಿರುವ ಘಟನೆ ಶಿರಿಯಾದ ಗ್ರಾಮದ ಪಡುಮುಂಡು ಎಂಬಲ್ಲಿ ಶನಿವಾರ ನಡೆದಿದೆ.
ಗಾಯಗೊಂಡವರನ್ನು ಪಡುಮುಂಡು ನಿವಾಸಿ ದಿನೇಶ್ ಶೆಟ್ಟಿ(50) ಹಾಗೂ ಅವರ ಪತ್ನಿ ವಸಂತಿ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರಲ್ಲಿ ತೀವ್ರವಾಗಿ ಗಾಯಗೊಂಡಿರುವ ದಿನೇಶ್ ಶೆಟ್ಟಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಬೆಳಗ್ಗೆ ಪಟಾಕಿ ಸಿಡಿಸುವ ವೇಳೆ ಅದರ ಕಿಡಿ ಹಾರಿ ಕಾರಿನ ಶೆಡ್ನಲ್ಲಿ ಇರಿಸಿದ್ದ ಕಲ್ಲುಕೋರೆಗೆ ಬಳಸುವ ರಾಸಾಯಿನಿಕ ವಸ್ತುವಿಗೆ ತಗಲಿತ್ತೆನ್ನಲಾಗಿದೆ. ಇದರಿಂದ ರಾಸಾಯಿನಿಕ ಸ್ಪೋಟಗೊಂಡ ಪರಿಣಾಮ ದಿನೇಶ್ ಶೆಟ್ಟಿ ದಂಪತಿ ಗಾಯಗೊಂಡರು. ಅಲ್ಲದೆ ಶೆಡ್ನಲ್ಲಿ ಇರಿಸಿದ್ದ ಕಾರಿನ ಮುಂಭಾಗ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.